ನೇಪಾಳ : ಕರ್ಫ್ಯೂ ತೆರವು, ಪ್ರತಿಭಟನೆ ಕಾವಿಗೆ ತಂಪೆರೆದ ಮಳೆ
ಕಠ್ಮಂಡು : ಉದ್ರಿಕ್ತ ಪ್ರತಿಭಟನಕಾರರ ಕಾವಿಗೆ ಮಂಗಳವಾರ ಬೆಳಿಗ್ಗೆ ಸುರಿದ ಮಳೆ ತಂಪೆರೆದಿದ್ದು , ರಾಜಧಾನಿ ನಗರದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ವಾಪಸ್ಸು ಪಡೆಯಲಾಗಿದೆ. ಆದರೂ ನೇಪಾಳಿ ಪಡೆ ನಗರದ ವಿವಿಧ ಭಾಗಗಳಲ್ಲಿ ಪಥ ಸಂಚಲನೆ ನಡೆಸುವುದನ್ನು ಮುಂದುವರಿಸಿದೆ.
ಕರ್ಫ್ಯೂ ಕಾಲದಲ್ಲಿ ಕನಿಷ್ಠ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಜನತೆ ಶಾಂತಿಯನ್ನು ಕಾಯ್ದುಕೊಳ್ಳಬೇಕೆಂದು ನೂತನ ದೊರೆ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಮೂರು ದಿನಗಳಲ್ಲಿ ಜನತೆಗೆ ಸತ್ಯಾಂಶ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಸೋಮವಾರ ಮೃತರಾದ ಎರಡು ದಿನಗಳ ದೊರೆ ಹಾಗೂ ರಾಜಕುಟುಂಬದ ಹತ್ಯೆಯ ಕೊಲೆಗಾರ ಎಂದು ನಂಬಲಾಗಿರುವ ದೀಪೇಂದ್ರ ಅವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ನಡೆಯಲಿದೆ. ಶುಕ್ರವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ರಾಜಕುಮಾರ ದೀಪೇಂದ್ರ ಗುಂಡೇಟಿನಿಂದ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅವರನ್ನು ಉಳಿಸಲು ಮಿಲಿಟರಿ ಆಸ್ಪತ್ರೆಯ ವೈದ್ಯರು ಎರಡು ದಿನಗಳ ಕಾಲ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದವು.
ಈ ನಡುವೆ ರಾಜಕುಟುಂಬದ ಬರ್ಬರ ಹತ್ಯೆಯ ಪ್ರಕರಣದ ಕುರಿತು ಕೇಶವ ಪ್ರಸಾದ್ ಉಪಾಧ್ಯಾಯ ನೇತೃತ್ವದ ಮೂವರು ಸದಸ್ಯರ ನ್ಯಾಯಾಂಗ ಸಮಿತಿ ವಿಚಾರಣೆಯನ್ನು ಪ್ರಾರಂಭಿಸಿದೆ. ಸಮಿತಿ ತನ್ನ ವರದಿಯನ್ನು ನೀಡಲು ಮೂರು ದಿನಗಳ ಗಡುವನ್ನು ದೊರೆ ಗೊತ್ತುಪಡಿಸಿದ್ದಾರೆ. ಆದರೆ, ಗಡುವಿನೊಳಗೆ ವರದಿ ಸಲ್ಲಿಸುವುದು ತುಂಬಾ ಕಷ್ಟಕರ ಎಂದು ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...