ಥೇವಾರಂ ನೇಮಕ ಪ್ರಶ್ನಿಸಲು ಮಾನವ ಹಕ್ಕು ಸಂಘಟನೆ ನಿರ್ಧಾರ
* ಪಪ್ರೀ ಶ್ರೀರಾಮನ್
ಚೆನ್ನೈ : ಕಾಡುಗಳ್ಳ ವೀರಪ್ಪನ್ನನ್ನು ಹಿಡಿಯಲು ವಾಲ್ಟರ್ ಥೇವಾರಂ ಅವರನ್ನು ಎಸ್.ಟಿ.ಎಫ್. ಮುಖ್ಯಸ್ಥರನ್ನಾಗಿ ನೇಮಿಸಿರುವ ತಮಿಳುನಾಡು ಸರಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಇಲ್ಲಿನ ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.
ಥೇವಾರಂ ಅವರ ನೇಮಕವು ಸಾಮಾಜಿಕ ನ್ಯಾಯದ ನೀತಿಗಳಿಗೆ ವಿರುದ್ಧವಾಗಿದೆ ಎಂದು ಪೀಪಲ್ಸ್ ಯುನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಸಂಘಟನೆಯ (ಪಿಯುಸಿಎಲ್) ಜಂಟಿ ಕಾರ್ಯದರ್ಶಿ ಎಸ್. ಬಾಲಮುರುಗನ್ ಈರೋಡ್ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
1990ರ ದಶಕದಲ್ಲಿ ಥೇವಾರಂ ಅವರು, ಎಸ್.ಟಿ.ಎಫ್. ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಗಿರಿಜನ ಮಹಿಳೆಯ ಹಕ್ಕಿನ ಉಲ್ಲಂಘನೆ ಮಾಡಿದ ಆರೋಪ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರ ನೇಮಕವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತಮ್ಮ ಸಂಘಟನೆ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಪಿಯುಸಿಎಲ್ನಂತೆಯೇ ಇತರ ಮಾನವ ಹಕ್ಕುಗಳ ಸಂಘಟನೆಗಳು ಕೂಡ ಥೇವಾರಂ ನೇಮಕವನ್ನು ವಿರೋಧಿಸಿವೆ. ಥೇವಾರಂ ನೇತೃತ್ವದ ವಿಶೇಷ ಕಾರ್ಯಪಡೆ ಕರ್ನಾಟಕ ಹಾಗೂ ತಮಿಳುನಾಡು ಗಡಿಯಲ್ಲಿ ವೀರಪ್ಪನ್ ಶೋಧ ಆರಂಭಿಸಿದ್ದಾಗ ಈ ಪ್ರದೇಶದಲ್ಲಿ ವ ವಾಸಿಸುವ ಜನರಿಗೆ ಕಿರುಕುಳ ನೀಡಿದ್ದರು. ಈಗಲೂ ಅದು ಮರುಕಳಿಸಬಹುದು ಎಂದು ಅವು ಅಭಿಪ್ರಾಯಪಟ್ಟಿವೆ.
90ರ ದಶಕದಲ್ಲಿ ಗಿರಿಜನರ ಮೇಲೆ ನಡೆದಿದ್ದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾ.ಸದಾಶಿವ ಆಯೋಗ ನಡೆಸಿದ ವಿಚಾರಣೆಯ ವರದಿ ಬಹಿರಂಗವಾಗದಂತೆ ಪೊಲೀಸ್ ಅಧಿಕಾರಿಗಳು ಹೊಸ ತಡೆಯಾಜ್ಞೆ ಪಡೆದಿದ್ದಾರೆ. ಈಗ ಇದು ನ್ಯಾಯಾಲಯದಲ್ಲಿದೆ. ಕನ್ನಡದ ವರನಟ ರಾಜ್ಕುಮಾರ್ ಅವರನ್ನು ಅಪಹರಿಸಿದ್ದ ಸಂದರ್ಭದಲ್ಲಿ ಸದಾಶಿವ ಆಯೋಗಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿತ್ತು. ರಾಜ್ ಬಿಡುಗಡೆ ನಂತರ ಪೊಲೀಸರು ಪುನಾ ಹೊಸ ತಡೆಯಾಜ್ಞೆ ಪಡೆದರು ಎಂದೂ ಎಸ್. ಬಾಲಮುರುಗನ್ ಹೇಳಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ