ಉತ್ತರ ಕರ್ನಾಟಕದಲ್ಲಿ ವಿವಿಧ ಶೈಕ್ಷಣಿಕ ಯೋಜನೆಗಳ ಜಾರಿ
ಗುಲ್ಬರ್ಗ: ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಉತ್ತರ ಕರ್ನಾಟಕದ ಪ್ರದೇಶಗಳಿಗೆ ಈ ವರ್ಷದಿಂದ ಶಿಕ್ಷಣ ಇಲಾಖೆ ಬಜೆಟ್ನ ಶೇ. 50ರಷ್ಟು ಹಣವನ್ನು ಮೀಸಲಿಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಚ್. ವಿಶ್ವ ನಾಥ್ ತಿಳಿಸಿದ್ದಾರೆ.
ಏಳು ಜಿಲ್ಲೆಗಳ ಶಿಕ್ಷಣ ಅಭಿವೃದ್ಧಿಗೆ ಚಾಲನೆ ನೀಡುವ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಸೋಮವಾರ ಮಾತನಾಡುತ್ತಿದ್ದರು. ಗುಲ್ಬರ್ಗ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶಿಕ್ಷಣಕ್ಕಾಗಿ ಹೆಚ್ಚು ಹಣ ಮೀಸಲಿಡುವುದಲ್ಲದೆ, ಈ ಏಳು ಜಿಲ್ಲೆಗಳ ಶಿಕ್ಷಣ ಪ್ರಗತಿ ಮೇಲೆ ನಿಗಾ ಇಡಲು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳ ಉಸ್ತುವಾರಿಗೆ ಗುಲ್ಬರ್ಗದಲ್ಲಿ ಹೊಸ ನಿರ್ದೇಶನಾಲಯವನ್ನು ರಚಿಸಲಾಗುವುದು ಎಂದರು.
ರಾಜ್ಯದ ಉಳಿದ ಜಿಲ್ಲೆಗಳ ಸಾಲಿನಲ್ಲಿ ಈ ಏಳು ಜಿಲ್ಲೆಗಳನ್ನು ತರಬೇಕು ಎಂಬ ನಿಟ್ಟಿನಲ್ಲಿ ಬರುವ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವನಾಥ್ ಹೇಳಿದರು. ಈ ನಿರ್ಣಯಗಳನ್ನು ಜಾರಿಗೆ ತರುವ ಬಗ್ಗೆ ಯಾವುದೇ ಅನುಮಾನಗಳು ಬೇಡ. ಈ ಕುರಿತ ಸರಕಾರಿ ಆದೇಶವನ್ನು ಸ್ಥಳದಲ್ಲಿಯೇ ಹೊರಡಿಸಲಾಗುತ್ತದೆ ಎಂದು ಅವರು ಹೇಳಿದರು.
(ಇನ್ಫೋ ವಾರ್ತೆ)