ಪರಿಸರ ಸ್ನೇಹ ಜೂನ್ 5ರಂದು ಮಾತ್ರವಾ,ಅಲ್ಲವೆನ್ನುತ್ತದೆ ವಿಫ್ರೋ
ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳು ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸಿ ಆಂದೋಲನ ಅಭಿಯಾನಗಳನ್ನು ಕಳೆದ ವರ್ಷ ಹಮ್ಮಿಕೊಂಡಿದ್ದವು. ಆದರೆ ಪ್ಲಾಸ್ಟಿಕ್ ಪೀಡೆ ಆ ಜಿಲ್ಲೆಗಳಿಂದ ಕಾಲ್ಕಿತ್ತಿರುವುದಕ್ಕೆ ಸಾಕ್ಷಿ ಕಾಣಿಸುವುದಿಲ್ಲ. ಆಂದೋಲನ ಅಭಿಯಾನಗಳ ಆಚೆಗೆ ನಿಂತು ಮೌನವಾಗಿ ಪರಿಸರ ಸ್ನೇಹಿಗಳಾಗಿರುವ ಸಂಸ್ಥೆಗಳೂ ಮಾಲಿನ್ಯ ನಗರಿ ಬೆಂಗಳೂರಿನಲ್ಲಿ ವೆ ಎನ್ನುವುದು ಖುಷಿಯ ಸಂಗತಿ ಅಲ್ವಾ ?
ಪರಿಸರ ಸ್ನೇಹಿಗಳಾಗಬೇಕಿದ್ರೆ ‘ಮರಗಿಡ ಬೆಳೆಸಿ, ಕಾಡು ಕಡಿಯಬೇಡಿ’ ಎಂದು ಭಾಷಣ ಹೊಡೆಯಬೇಕೆಂದೇ ಇಲ್ಲ ಎನ್ನುವ ಬೆಂಗಳೂರಿನ ‘ಗಿಲ್ಡ್ ಆಫ್ ವುಮನ್ ಅಚೀವರ್ಸ್ (ಜಿಓಡಬ್ಲ್ಯುಎ)’ ಬಟ್ಟೆ ಮತ್ತು ಕಾಗದದ ಲಕೋಟೆಗಳನ್ನು ತಯಾರಿಸಲು ತರಬೇತಿ ನೀಡುತ್ತಾರೆ. ಮಹಿಳೆಯರಿಗೆ ಇದು ಸ್ವ ಉದ್ಯೋಗವೂ ಹೌದು, ಮಾರುಕಟ್ಟೆಯಲ್ಲಿ ಇಂತಹ ಲಕೋಟೆಗಳಿಗೆ ಬೇಡಿಕೆಯೂ ಇದೆ ಎಂದು ಸಂಘದ ಅಧ್ಯಕ್ಷೆ ಛಾಯಾ ಶ್ರೀವಾಸ್ತವ ಹೇಳುತ್ತಾರೆ.
ಪರಿಸರ ದಿನದಂದು ಮಾತ್ರ ಕೆಎಸ್ಆರ್ಟಿಸಿ ಬಸ್ಗಳ ಹೊಗೆ ನಳಿಗೆಯನ್ನು ಪರಿಶೀಲಿಸುವ ಸಾರಿಗೆ ಸಂಸ್ಥೆಯ ಸುದ್ದಿ ಬರುತ್ತಿದ್ದಂತೆಯೇ ಸಿಲಿಕಾನ್ ಸಿಟಿಯ ದಿಗ್ಗಜರೆನಿಸಿದ ವಿಪ್ರೋ ಮತ್ತು ಇನ್ಫೋಸಿಸ್ ಕಂಪೆನಿಗಳು ನಿಸರ್ಗ ಪ್ರೇಮಿಗಳೂ ಹೌದು ಎನ್ನುವ ಸುದ್ದಿ ಬಂದಿದೆ.
ವಿಪ್ರೋ ವಿಶ್ವ ಪರಿಸರ ದಿನಕ್ಕಾಗಿ ಕಾಯುವುದಿಲ್ಲ. ನಿಸರ್ಗ ಉಳಿಸಲು ಕಂಪೆನಿ ಮಾಡುವ ಪ್ರಯತ್ನಗಳು -
- ಹ್ಯಾಲೋಜನ್ ಬಲ್ಬ್ಗಳ ಬದಲಿಗೆ ಕಡಿಮೆ ಶಕ್ತಿ ಖರ್ಚಾಗುವ ಬಲ್ಬ್ಗಳ ಬಳಕೆ.
- ನಾಲ್ಕು ಮಳೆ ನೀರು ಸಂಗ್ರಹಣಾ ವ್ಯವಸ್ಥೆ
- ಪ್ರತಿದಿನ ಎಲ್ಲ ಕಂಪ್ಯೂಟರ್ಗಳನ್ನು ಕೆಲಸವಾದ ತಕ್ಷಣ ಸ್ವಿಚ್ ಆಫ್ ಮಾಡುವುದು
- ಕಂಪ್ಯೂಟರ್ ಜೊತೆ ಬರುವ ಥರ್ಮಾಕೋಲ್ಗಳನ್ನು ಕಂಪ್ಯೂಟರ್ ಕಂಪೆನಿಗಳಿಗೆ ವಾಪಾಸು ಕಳುಹಿಸುವುದು
- ಉಳಿದ ಆಹಾರಗಳನ್ನು ಹಂದಿ ಸಾಕಾಣಿಕಾ ಕೇಂದ್ರಕ್ಕೆ ಕಳುಹಿಸಲಾಗುವುದು, ಕಸದ ಬುಟ್ಟಿಗೆ ಚೆಲ್ಲುವುದಿಲ್ಲ.
- ದಿನಪತ್ರಿಕೆಗಳನ್ನು ಲಕೋಟೆ ತಯಾರಿಕಾ ಸಂಘಟನೆಗಳಿಗೆ ಕೊಡುವುದು.
- ಸರ್ಜಾಪುರದಲ್ಲಿರುವ ಕಂಪೆನಿಯ ಜಾಗದಲ್ಲಿ ಹುಲ್ಲು ಬೆಳೆಸಿ ವರ್ಷಕ್ಕೊಮ್ಮೆ ಅವುಗಳನ್ನು ಕಂಪೋಸ್ಟ್ ಮಾಡುವುದು.
(ಇನ್ಫೋ ವಾರ್ತೆ)