ನಾನು ವೀರಪ್ಪನ್ ಬೆನ್ನು ಹತ್ತಿದ ಬೇತಾಳ : ವಾಲ್ಟರ್ ಥೇವಾರಂ
ಚೆನ್ನೈ : ದಶಕಗಳಿಂದ ಕರ್ನಾಟಕ ಹಾಗೂ ತಮಿಳು ನಾಡು ಸರಕಾರಕ್ಕೆ ಮತ್ತು ಎರಡೂ ರಾಜ್ಯಗಳ ಪೊಲೀಸ್ ಪಡೆಗೆ ಸವಾಲಾಗಿರುವ ಕಾಡುಗಳ್ಳ ವೀರಪ್ಪನ್ನನ್ನು ಜೀವಂತವಾಗಿ ಹಿಡಿದೇ ತೀರುವ ಛಲವನ್ನು ತಮಿಳುನಾಡಿನ ವಿಶೇಷ ಕಾರ್ಯಪಡೆಯ ಹೊಸ ಮುಖ್ಯಸ್ಥ ವಾಲ್ಟರ್ ಐಸಾಕ್ ಥೇವಾರಂ ಹೊಂದಿದ್ದಾರೆ.
ತಮ್ಮ ಸೇವಾವಧಿಯಲ್ಲಿ ಈಡೇರದ ಆಸೆ ಅಥವಾ ಪೂರ್ಣಗೊಳಿಸಲಾಗದೆ ಬಾಕಿ ಉಳಿದಿದ್ದ ಏಕೈಕ ಕರ್ತ್ಯವ್ಯ ಎಂದರೆ ವೀರಪ್ಪನ್ ಬಂಧನ. ಈಗ ಮತ್ತೊಮ್ಮೆ ಅವಕಾಶ ದೊರೆತಿದೆ, ಕಾರ್ಯಾಚರಣೆಗೆ ಹಣಕಾಸಿನ ತೊಂದರೆಯೂ ಇಲ್ಲ, ಗಡಿ ಭದ್ರತಾಪಡೆಯ ನೆರವೂ ಇದೆ. ಈ ಹಿನ್ನೆಲೆಯಲ್ಲಿ ವೀರಪ್ಪನ್ ಬಂಧನ ಖಂಡಿತಾ ಸಾಧ್ಯ ಎಂಬ ಆಶಾ ಭಾವನೆಯನ್ನು ಥೇವಾರಂ ವ್ಯಕ್ತಪಡಿಸಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ವೀರಪ್ಪನ್ ವಿರುದ್ಧ ನಿರಂತರ ಕಾರ್ಯಾಚರಣೆಗಳು ನಡೆಯಲಿಲ್ಲ. 1992ರಲ್ಲಿ ತಮಿಳುನಾಡು ಸರಕಾರ ವೀರಪ್ಪನ್ ವಿರುದ್ಧ ವಿಶೇಷ ಕಾರ್ಯಪಡೆಯ ಕಾರ್ಯಾಚರಣೆ ಆರಂಭಿಸಿದಾಗ ಕೇವಲ ಒಂದೂವರೆ ವರ್ಷಗಳ ಅವಧಿಯಲ್ಲಿ ನಾವು ವೀರಪ್ಪನ್ ಗ್ಯಾಂಗ್ನ ಹುಟ್ಟಡಗಿಸಿದ್ದೆವು ಎಂದು ಆಂಗ್ಲ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಆ ಅವಧಿಯಲ್ಲಿ 150ರಷ್ಟಿದ್ದ ವೀರಪ್ಪನ್ ಪಡೆಯ ಸಂಖ್ಯೆ ಕೇವಲ 5ಕ್ಕೆ ಇಳಿದಿತ್ತು. ವೀರಪ್ಪನ್ ಪಡೆಯ 58ಜನರನ್ನು ಕೊಂದು 100 ಜನರನ್ನು ಬಂಧಿಸಿದ್ದೆವು. ಅಲ್ಲದೆ 30 ಟನ್ನಷ್ಟು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಹಂತದಲ್ಲಿ 2 ಕಮಾಂಡೋ ಕಾರ್ಯಾಚರಣೆ ಹಾಗೂ 28 ದಾಳಿಗಳು ನಡೆದಿದ್ದವು ಎಂಬುದನ್ನೂ ಅವರು ಸ್ಮರಿಸಿದ್ದಾರೆ.
ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಅಂತಹ ಯಾವುದೇ ದಾಳಿ ನಡೆದಿಲ್ಲ ಕೇವಲ ಅಪಹರಣಗಳು ಮಾತ್ರ ಮುಂದುವರಿದಿತ್ತು. ರಾಜ್ಕುಮಾರ್ ಅವರ ಬಿಡುಗಡೆ ಆದ ಸಂದರ್ಭದಲ್ಲಿ ವೀರಪ್ಪನ್ನನ್ನು ಬಂಧಿಸಲು ಉತ್ತಮ ಅವಕಾಶ ಇತ್ತು. ಈ ಕಾರ್ಯಕ್ಕೆ ತಮ್ಮನ್ನು ಕಳುಹಿಸುವಂತೆ ಜಯಲಲಿತಾ ಅವರು ಕೂಡ ಸಲಹೆ ಮಾಡಿದ್ದರು ಆದರೆ, ಡಿ.ಎಂ.ಕೆ. ಸರಕಾರ ಆ ಕಾರ್ಯ ಮಾಡಲಿಲ್ಲ ಎಂದೂ ಅವರು ಹೇಳಿದ್ದಾರೆ.
ಈಗ ನಾನು ಕಾರ್ಯಾಚರಣೆಗೆ ಹೋದರೆ, ಸ್ವಯಂ ಸೇವಕರೂ ಹಿಂತಿರುಗುತ್ತಾರೆ. ಮಿಗಿಲಾಗಿ ಕಾರ್ಯಪಡೆ ಸಿಬ್ಬಂದಿಯ ಉತ್ಸಾಹವು ಇಮ್ಮುಡಿಯಾಗಲಿದೆ. ನಮ್ಮ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳಿವೆ. ನಮಗೆ ಈಗ ಅಗತ್ಯ ಇರುವುದು ಇಂಟರ್ ಗ್ರೂಪ್ ಕಮ್ಯುನಿಕೇಷನ್. ಅದಕ್ಕಾಗಿ ನಾನು ಕಾರ್ಯಯೋಜನೆ ಸಿದ್ಧಪಡಿಸುತ್ತಿದ್ದೇನೆ ಎಂದೂ ಅವರು ಹೇಳಿದ್ದಾರೆ. ದಾವರಂ ವ್ಯಕ್ತಪಡಿಸಿರುವ ಇತರ ಅಭಿಪ್ರಾಯಗಳಿವು:
- ವೀರಪ್ಪನ್ನನ್ನು ಜೀವಸಹಿತ ಹಿಡಿಯುವುದೇ ನಮ್ಮ ಗುರಿ. ಆತ ಶರಣಾದರೆ ಕ್ಷೇಮ. ಆದರೆ, ಕ್ಷಮಾದಾನ ಅಥವಾ ಷರತ್ತುಗಳಿಗೆ ಆಸ್ಪದ ಇರಬಾರದು. ವೀರಪ್ಪನ್ ಪ್ರಕರಣ ಪೂಲನ್ ದೇವಿ ಪ್ರಕರಣದಂತಲ್ಲ. ಆತನ ಹಲವು ಪ್ರಕರಣಗಳಲ್ಲಿ ಪೊಲೀಸರೇ ಪ್ರಮುಖ ಸಾಕ್ಷಿ.
- ನಾನು ನನ್ನ ಎಲ್ಲ ಕರ್ತವ್ಯ ಪೂರೈಸಿದ್ದೇನೆ. ಇದೊಂದೇ ಬಾಕಿ ಉಳಿದಿರುವ ಕೆಲಸ. ಈ ಕೆಲಸ ಪೂರೈಸುವುದಾಗಿ ಮುಖ್ಯಮಂತ್ರಿಗಳಿಗೆ ಹಿಂದೆ ಪ್ರಮಾಣ ಮಾಡಿದ್ದೆ. ಇಡೀ ರಾಜ್ಯದ ಪೊಲೀಸ್ ಮಹಾನಿರ್ದೇಶಕನಾಗಿದ್ದ ನನಗೆ ಜವಾಬ್ದಾರಿಯ ಒತ್ತಡದಿಂದಾಗಿ ಈ ಕೆಲಸ ಪೂರ್ಣವಾಗಿರಲಿಲ್ಲ. ಈಗ ನಿವೃತ್ತಿಯಾದ 4 ವರ್ಷಗಳ ಬಳಿಕ ಮತ್ತೊಮ್ಮೆ ಈ ಕಾರ್ಯ ಒಪ್ಪಿಸಿ ಮನ್ನಣೆ ನೀಡಲಾಗಿದೆ. ನನಗೆ ವೀರಪ್ಪನ್ನನ್ನು ಹಿಡಿದೇ ಹಿಡಿಯುತ್ತೇನೆ ಎಂಬ ನಂಬಿಕೆ ಇದೆ.
- ಕಾರ್ಯಪಡೆ ಕಾಡು ಪ್ರವೇಶಿಸುತ್ತಿದ್ದಂತೆಯೇ ಆದಿವಾಸಿಗಳಿಂದ ಸಾಕಷ್ಟು ಮಾಹಿತಿ ಲಭಿಸುತ್ತದೆ
- ಮಾಹಿತಿಗಾಗಿ ವೀರಪ್ಪನ್ ಗಿರಿಜನರಿಗೆ 500ರ ನೋಟುಗಳನ್ನು ಕೊಟ್ಟರೆ ನಾವು 50 ಮಾತ್ರ ಕೊಡುತ್ತೇವೆ. ನಾವೂ ಹೆಚ್ಚು ಹಣ ನೀಡಿ, ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಲೇಬೇಕು. ಇದಕ್ಕೆ ಮುಖ್ಯಮಂತ್ರಿಗಳು ಹೆಚ್ಚಿನ ಹಣಕಾಸು ನೆರವು ನೀಡುವ ಭರವಸೆ ನೀಡಿದ್ದಾರೆ.
- ಉಪಯುಕ್ತ ಮಾಹಿತಿಗೆ ಒಂದು ಲಕ್ಷ ಬಹುಮಾನ ನೀಡಬೇಕು. ವೀರಪ್ಪನ್ ಸಹಚರರ ಬಂಧನಕ್ಕೆ 40 ಲಕ್ಷ ನೀಡಬೇಕು.
- ಕಾಡಿನ ಪ್ರದೇಶದ ಜನರಿಗೆ ಕಾರ್ಯಪಡೆ ಒಂದೆರಡು ತಿಂಗಳು ಇಲ್ಲಿದ್ದು ಹೋಗತ್ತೆ. ಆದರೆ, ವೀರಪ್ಪನ್ ಕಾಯಂ ಆಗಿ ಇರ್ತಾನೆ ಎಂಬ ಭಾವನೆ ಇದೆ. ನಾವು ಈ ಭಾವನೆಯನ್ನು ಬದಲಾಯಿಸಿ. ನಾವೇ ಶಾಶ್ವತ ಎಂಬುದನ್ನು ಮನವರಿಕೆ ಮಾಡಿಸಬೇಕು.
- ನನಗೆ ಮುಪ್ಪಾಗಿದೆ ಎಂದು ಎನಿಸಿಲ್ಲ. ನನ್ನಲ್ಲಿ ಈಗಲೂ ಛಲ ಇದೆ.
ಮುಖಪುಟ / ವೀರಪ್ಪನ್ ಶಿಕಾರಿ