ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆಗೆ 6ರಂದು ಹುಬ್ಬಳ್ಳಿಯಲ್ಲಿ ಸಭೆ
ಬೆಂಗಳೂರು : ನೈಋತ್ಯ ರೈಲ್ವೆ ವಲಯ ಕಚೇರಿ ಸ್ಥಾಪನೆ ಹಾಗೂ ಹುಬ್ಬಳ್ಳಿ - ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯೂ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹತ್ತಾರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಜೂನ್ 6ರ ಬುಧವಾರ ಹುಬ್ಬಳ್ಳಿಯಲ್ಲಿ ಉನ್ನತ ಮಟ್ಟದ ಸಭೆಯಾಂದನ್ನು ಕರೆದಿದ್ದಾರೆ.
ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ರಾಜ್ಯ ಸರಕಾರ ನೇಮಿಸಿದ್ದ ಆಯೋಗದ ಅಧ್ಯಕ್ಷ ಡಾ. ಡಿ.ಎಂ. ನಂಜುಂಡಪ್ಪ ಅವರು ನೀಡಿರುವ ವರದಿ ಸರಕಾರದ ಕೈಯಲ್ಲಿದ್ದು, ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಭೆಗೆ ಮಹತ್ವ ಬಂದಿದೆ.
ಆಯೋಗದ ವರದಿಯಲ್ಲಿ ಸೂಚಿಸಲಾಗಿರುವ ಸಲಹೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಮಿಗಿಲಾಗಿ ಹೈಟೆಕ್ ಮುಖ್ಯಮಂತ್ರಿ ಕೃಷ್ಣ ಅವರು ಉತ್ತರ ಕರ್ನಾಟಕವನ್ನು ಮರೆತಿದ್ದಾರೆ ಎಂಬ ಆರೋಪಗಳಿಗೆ ಈ ಉನ್ನತ ಮಟ್ಟದ ಸಭೆ ಉತ್ತರ ನೀಡಲಿದೆ ಎಂದೂ ನಿರೀಕ್ಷಿಸಲಾಗಿದೆ.
ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರು, ಸಂಸದರು, ಉನ್ನತಾಧಿಕಾರಿಗಳು ಪಾಲ್ಗೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ. ಕುಡಿಯುವ ನೀರು, ವಿದ್ಯುತ್, ಶಿಕ್ಷಣ, ನೀರಾವರಿ ಮೊದಲಾದ ಮೂಲಭೂತ ಸೌಕರ್ಯ ಹಾಗೂ ಹೈಕೋರ್ಟ್ ಪೀಠ, ನೈಋತ್ಯ ರೈಲ್ವೆ ವಲಯ ಸಭೆಯಲ್ಲಿ ಚರ್ಚೆಗೆ ಬರಲಿರುವ ಪ್ರಮುಖ ವಿಷಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಮುಖಪುಟ / ಇವತ್ತು... ಈ ಹೊತ್ತು...