ತುರುವೇಕೆರೆ : ಸರಣಿ ದರೋಡೆಯಲ್ಲಿ ಲಕ್ಷಕ್ಕೂ ಹೆಚ್ಚು ನಗನಾಣ್ಯ ಲೂಟಿ
ತುರುವೇಕೆರೆ : ಇಲ್ಲಿನ ಕುಣಿಕೇನ ಹಳ್ಳಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ನಾಲ್ಕು ಮನೆಗಳ ಮೇಲೆ ಸರಣಿ ದರೋಡೆ ಮಾಡಿದ ದುಷ್ಕರ್ಮಿಗಳು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ನಗನಾಣ್ಯಗಳನ್ನು ದೋಚಿದ್ದಾರೆ.
ಒಂದು ವಸತಿ ಗೃಹ ಮತ್ತು ಮೂರು ಮನೆಗಳಿಗೆ ನುಗ್ಗಿದ ದುಷ್ಕರ್ಮಿಗಳು ಮನೆಯವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಸ್ವತ್ತು ಮತ್ತು ಹಣವನ್ನು ದೋಚಿದ್ದಾರೆ. ಮೊದಲು ಜಾನುವಾರ್ ಕೇಂದ್ರದ ವಾಚ್ಮೆನ್ ಕುಮಾರ್ ನಾಯಕ್ ಮನೆಗೆ ನುಗ್ಗಿದ ದರೋಡೆಕೋರರು ಅವರನ್ನು ಮನೆಯಲ್ಲಿ ಕೂಡಿ ಹಾಕಿ 30 ಸಾವಿರ ಮೌಲ್ಯದ ಆಭರಣದೊಂದಿಗೆ, ಪಕ್ಕದಲ್ಲಿಯೇ ಇದ್ದ ಸತ್ಯನಾರಾಯಣ್ ಅವರ ಮನೆಗೆ ತೆರಳಿದ್ದಾರೆ.
ಅಲ್ಲಿಯೂ ಮತ್ತೆ ಸುಮಾರು 30 ಸಾವಿರ ರೂಪಾಯಿಯ ನಗ ನಾಣ್ಯಗಳನ್ನು ಕಿತ್ತುಕೊಂಡು, ಮನೆಯವರನ್ನು ಕೂಡಿ ಹಾಕಿ ಜೋಸೆಫ್ ಮನೆಗೆ ಹೋಗಿದ್ದಾರೆ. ಅವರ ಹೆಂಡತಿಯ ಮೇಲೆ ಹಲ್ಲೆ ಮಾಡಿ 33 ಸಾವಿರ ರೂಪಾಯಿಯ ಒಡವೆಗಳೊಂದಿಗೆ, ಕುಮಾರ್ ನಾಯಕ್ ಅವರನ್ನು ಕರೆದುಕೊಂಡು ಅವರ ಕಚೇರಿಗೆ ತೆರಳಿ ಅಲ್ಲಿದ್ದ ಎರಡು ಸಾವಿರ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ಕೊನೆಯದಾಗಿ, ಕೇಂದ್ರ ಉಪನಿರ್ದೇಶಕ ಎಂ.ಡಿ. ದಾಸ್ ಅವರ ಮನೆಗೂ ದಾಳಿ ಮಾಡಿ 10 ಸಾವಿರ ರೂಪಾಯಿಯಾಂದಿಗೆ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳ ತಂಡದಲ್ಲಿ ಆರು ಮಂದಿ ಇದ್ದು ಎಲ್ಲರೂ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿರುವುದಾಗಿ ವರದಿಯಾಗಿದೆ. ಜಿಲ್ಲಾ ಪೊಲೀಸ್ ಅಧಿಕಾರಿ ಆರ್. ಹಿತೇಂದ್ರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
(ಇನ್ಫೋ ವಾರ್ತೆ)