ಜಿಲ್ಲಾಧಿಕಾರಿಯಿಂದ ಕಾಂಗ್ರೆಸ್ ಸಮಾವೇಶ : ಶಿವರಾಂ ವಿರುದ್ಧ ಸಂಸದ
ದಾವಣಗೆರೆ : ಸಿನಿಮಾ ನಟ ಅಂಬರೀಷ್ ಅವರ ಹುಟ್ಟು ಹಬ್ಬ ಸಮಾರಂಭಕ್ಕೆ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಜಿಲ್ಲಾಧಿಕಾರಿ ಶಿವರಾಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ಜಿ. ಮಲ್ಲಿಕಾರ್ಜುನಪ್ಪ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಅತ್ಯಂತ ಜವಾಬ್ದಾರಿಯುತ ಹಾಗೂ ಗೌರವಯುತ ಹುದ್ದೆಯನ್ನು ಜಿಲ್ಲಾಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ನಗರದಲ್ಲಿ ದರೋಡೆಕೋರರ ಗುಂಡೇಟಿನಿಂದ ಓರ್ವ ವ್ಯಕ್ತಿ ಮೃತನಾದ ಸಂದರ್ಭದಲ್ಲಿ , ಕನಿಷ್ಠ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ಕೊಡದ ಜಿಲ್ಲಾಧಿಕಾರಿ ಆ ಸಮಯದಲ್ಲಿ ಸಿನಿಮಾ ಮಂದಿಯನ್ನು ಸ್ವಾಗತಿಸುತ್ತಿದ್ದರು ಎಂದು ತಮ್ಮ ಪತ್ರದಲ್ಲಿ ಮಲ್ಲಿಕಾರ್ಜುನಪ್ಪ ಆರೋಪಿಸಿದ್ದಾರೆ.
ಅಪ್ಪಟ ಕಾಂಗ್ರೆಸ್ ಸಮಾವೇಶದಂತಿದ್ದ ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದವರನ್ನು ಹೊರತುಪಡಿಸಿ, ಇತರ ಪಕ್ಷದ ಜನ ಪ್ರತಿನಿಧಿಗಳಿಗೆ ಆಹ್ವಾನವಿರಲಿಲ್ಲ . ಸಂಪೂರ್ಣ ರಾಜಕೀಯಮಯವಾಗಿದ್ದ ಸಮಾರಂಭಕ್ಕೆ ಅಧಿಕಾರ ದುರುಪಯೋಗಪಡಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಮತ್ತೊಂದು ಪ್ರತ್ಯೇಕ ಪತ್ರದಲ್ಲಿ , ನಗರದಲ್ಲಿ ನಡೆದ ದರೋಡೆಯನ್ನು ತಡೆಯುವಲ್ಲಿ ವಿಫಲವಾದ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗ ಮಾಡಬೇಕೆಂದು ಮಲ್ಲಿಕಾರ್ಜುನಪ್ಪ ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...