ನೇಪಾಳ ದೊರೆ ಬೀರೇಂದ್ರ- ರಾಣಿ ಐಶ್ವರ್ಯ ಮಗನಿಂದಲೇ ಕಗ್ಗೊಲೆ
ಕಠ್ಮಂಡು : ನೇಪಾಳದ ದೊರೆ ಬೀರೇಂದ್ರ(55) ಹಾಗೂ ಅವರ ಪತ್ನಿ ಐಶ್ವರ್ಯ(52) ತಮ್ಮ ಪುತ್ರ ರಾಜಕುಮಾರ ದೀಪೇಂದ್ರ(30) ಅವರಿಂದಲೇ ಶುಕ್ರವಾರ ರಾತ್ರಿ ಕಗ್ಗೊಲೆಗೀಡಾಗಿದ್ದಾರೆ. ರಾಜ ಕುಟುಂಬಕ್ಕೆ ಸೇರಿದ ಇತರ ಕನಿಷ್ಠ 11 ಮಂದಿಯನ್ನು ಕೂಡ ಶುಕ್ರವಾರ ರಾತ್ರಿ ದೀಪೇಂದ್ರ ಕಠ್ಮಂಡುವಿನ ನಾರಾಯಣಹಿಟಿ ಅರಮನೆಯಲ್ಲಿ ಗುಂಡಿಟ್ಟು ಕೊಂದಿದ್ದಾರೆ.
ರಾಜಕುಮಾರ ನಿರಂಜನ ಮತ್ತು ರಾಜಕುಮಾರಿಯರಾದ ಶ್ರುತಿ, ಶಾರದಾ, ಶಾಂತಿ ಹಾಗೂ ಕುಮಾರ್ ಖಡ್ಗ ಚೌನಿ ಮಿಲಿಟರಿ ಆಸ್ಪತ್ರೆಯಲ್ಲಿ ಗುಂಡೇಟಿನ ಗಾಯಗಳಿಂದ ಕೊನೆಯುಸಿರೆಳೆದರೆಂದು ನೇಪಾಳಿ ಟೈಮ್ಸ್ ವರದಿ ಮಾಡಿದೆ. ದೀಪೇಂದ್ರ ಅವರ ಮದುವೆಗೆ ಸಂಬಂಧಿಸಿದ ಪೋಷಕರ ತಕರಾರಿನಿಂದ ಆತ ಈ ದುಷ್ಕೃತ್ಯವೆಸಗಿದ್ದಾನೆ ಎಂದು ನಂಬಲಾಗಿದೆ. ರಾಜಕುಮಾರನ ಆಯ್ಕೆಯ ವಧುವಿನ ಕುರಿತು ಮಹಾರಾಣಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಸೆಮಿ- ಆಟೋಮೆಟಿಕ್ ಗನ್ನಿಂದ ದೀಪೇಂದ್ರ ಈ ದುಷ್ಕೃತ್ಯವೆಸಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಹೆಚ್ಚೂ ಕಡಿಮೆ ಕೋಮಾವಸ್ಥೆಯಲ್ಲಿದ್ದ ಆತ ಹುಚ್ಚಾಪಟ್ಟೆ ಗುಂಡು ಹಾರಿಸಿದ ಎನ್ನಲಾಗಿದೆ. ತನಗೆ ಕೂಡ ದೀಪೇಂದ್ರ ಗುಂಡು ಹಾರಿಸಿಕೊಂಡಿದ್ದು, ಗಾಯಗಳಿಂದಾಗಿ ದೀಪೇಂದ್ರ ಕೂಡ ನಿಧನ ಹೊಂದಿದ್ದಾನೆಂದು ಕೆಲವು ವರದಿಗಳು ತಿಳಿಸಿವೆ.
(ಐಎಎನ್ಎಸ್)