ಕನ್ನಡದಲ್ಲಿ ಜೀವನ ವಿಜ್ಞಾನ ಪುಸ್ತಕ ಮಾಲೆ ಪ್ರಕಟಣೆ
ಬೆಂಗಳೂರು: ವಿದ್ಯಾರ್ಥಿಗಳ ವೈಯಕ್ತಿಕ ವ್ಯಕ್ತಿತ್ವದ ವಿಕಸನಕ್ಕೆ ನೆರವಾಗುವ ಜೀವನ ವಿಜ್ಞಾನ ಪುಸ್ತಕ ಮಾಲೆಯ ಕನ್ನಡ ಆವೃತ್ತಿ ಬಿಡುಗಡೆಗೆ ಸಿದ್ಧವಾಗಿದೆ. ಆಚಾರ್ಯ ಮಹಾಪ್ರಾಯ ಎಜುಕೇಷನ್ ಟ್ರಸ್ಟ್ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಪ್ರಕಟಿಸಿರುವ ಈ ಪುಸ್ತಕ ಮಾಲೆಯನ್ನು ಶ್ರೀ ಆದಿಚುಂಚನಗಿರಿ ಮಠದ ಬಾಲ ಗಂಗಾಧರ ನಾಥ ಸ್ವಾಮಿಗಳ ಒತ್ತಾಸೆಯ ಮೇಲೆ ಕನ್ನಡಕ್ಕೆ ಅನುವಾದಿಸಲಾಗಿದೆ.
ಈ ಪುಸ್ತಕ ಮಾಲೆಯನ್ನು ಜೂನ್ 1ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಬಿಡುಗಡೆ ಮಾಡುವರು ಮಹಾಪ್ರಾಯ ಎಜುಕೇಷನ್ ಟ್ರಸ್ಟ್ನ ಆಡಳಿತ ಮಂಡಳಿ ಸದಸ್ಯ ಲಲಿತ್ ಜೈನ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಜೀವನ ವಿಜ್ಞಾನ ಪುಸ್ತಕ ಮಾಲೆಯಲ್ಲಿ ಒಟ್ಟು 12 ಪುಸ್ತಕಗಳಿವೆ. 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳು ಉಪಯುಕ್ತವಾಗಿವೆ. ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ಇದನ್ನು ಪಠ್ಯವೆಂದೂ ಪರಿಗಣಿಸಿದ್ದಾರೆ ಎಂದೂಅವರು ಹೇಳಿದರು.
ಒಂದೊಂದು ಪುಸ್ತಕದ ಮುಖಬೆಲೆ 20 ರುಪಾಯಿಗಳಾಗಿದ್ದು, ಕೊಳ್ಳಬಯಸುವ ಸಾರ್ವಜನಿಕರಿಗೆ ಶೇ.50ರ ರಿಯಾಯಿತಿಯಲ್ಲಿ ಪುಸ್ತಕ ದೊರಯಲಿದೆ ಎಂದ ಅವರು, ಆದಿಚುಂಚನಗಿರಿ ಮಠದ ಶಾಲೆಗಳಲ್ಲಿ ಪಠ್ಯದ ಜತೆಗೆ ಈ ಪುಸ್ತಕ ಮಾಲೆಯ ವಿಷಯಗಳನ್ನೂ ಭೋದಿಸಲಾಗುತ್ತದೆ ಎಂದರು.
ಸನ್ಮಾನ : ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಓಸ್ವಾಲ್ ಪರಿಷತ್ ವತಿಯಿಂದ ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳಿಗೆ ವಿದ್ಯಾ ಸಾಮ್ರಾಟ್ ಎಂಬ ಗೌರವ ನೀಡಿ ಸನ್ಮಾನಿಸಲಾಗುವುದು ಎಂದೂ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮಿಗಳು ಭಾಗವಹಿಸಿದ್ದರು.