ಎಸ್.ಎಂ. ಕೃಷ್ಣ, ನಿಯೋಗಕ್ಕೆ ತಪ್ಪಿದ ಅಮೆರಿಕಾ ವಿಮಾನಯಾನ
ಬೆಂಗಳೂರು : ಮಾಹಿತಿ ತಂತ್ರಜ್ಞಾನದ ದಿಗ್ಗಜರು ಹಾಗೂ ಕೈಗಾರಿಕಾ ವಲಯದ ಅತಿರಥ ಮಹಾರಥರ ನಿಯೋಗದೊಂದಿಗೆ ಹತ್ತು ದಿನಗಳ ಕಾಲದ ಅಮೆರಿಕಾ ಪ್ರವಾಸಕ್ಕೆ ಸಜ್ಜಾಗುತ್ತಿದ್ದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ದಿಢೀರನೆ ಆ ಕಾರ್ಯಕ್ರಮವನ್ನೇ ರದ್ದು ಪಡಿಸಿದ್ದಾರೆ.
ಇನ್ಫೋಸಿಸ್ನ ಅಧ್ಯಕ್ಷ ನಾರಾಯಣಮೂರ್ತಿ, ವಿಪ್ರೋದ ಅಜೀಮ್ ಪ್ರೇಮ್ಜೀ, ಜೀವತಂತ್ರಜ್ಞಾನ ಕ್ಷೇತ್ರದ ಪರಿಣತ ಡಾ. ಕಿರಣ್ ಮಜುಂದಾರ್ ಸೇರಿದಂತೆ ಹಲವು ಗಣ್ಯರ ನಿಯೋಗದೊಂದಿಗೆ ಜೂನ್ 16ರಿಂದ 10 ದಿನಗಳ ಕಾಲ ಮುಖ್ಯಮಂತ್ರಿ ಪ್ರವಾಸ ಕೈಗೊಳ್ಳಬೇಕಿತ್ತು. ಈ ಸಂಬಂಧ ಎಲ್ಲ ಗಣ್ಯರಿಗೂ ಅಧಿಕೃತ ಆಹ್ವಾನವೂ ಹೋಗಿತ್ತು. ಪ್ರವಾಸ ಪ್ರಕ್ರಿಯೆಗಳೆಲ್ಲವೂ ಬಹುತೇಕ ಅಂತಿಮ ಹಂತದಲ್ಲಿದ್ದವು.
ಈ ಹಂತದಲ್ಲಿ ಮುಖ್ಯಮಂತ್ರಿಗಳು ಪ್ರವಾಸ ರದ್ದುಗೊಳಿಸಿರುವುದು ಭಾರಿ ಕುತೂಹಲ ಮೂಡಿಸಿದೆ. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದ ರಸ್ತೆ, ಸೇತುವೆ, ವಿದ್ಯುಚ್ಛಕ್ತಿಯೇ ಮೊದಲಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುತ್ತಿರುವುದೇ ಈ ಪ್ರವಾಸ ರದ್ದಿಗೆ ಕಾರಣವೆಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.
ಅಮೆರಿಕದ ಸಾಫ್ಟ್ವೇರ್ ವಲಯದಲ್ಲಿ ಹಾಗೂ ಆರ್ಥಿಕವಲಯದಲ್ಲಿನ ಮಂದಗತಿಯ ಹಿನ್ನೆಲೆಯಲ್ಲಿ ಈ ಸನ್ನಿವೇಶವನ್ನು ಕರ್ನಾಟಕದ ಹಿತಕ್ಕೆ ಬಳಸಿಕೊಳ್ಳುವುದು ಈ ಪ್ರವಾಸದ ಉದ್ದೇಶವಾಗಿತ್ತು. ರಾಜ್ಯಕ್ಕೆ ದೊರಕಬೇಕಿರುವ ಆರ್ಥಿಕ ನೆರವಿನ ಬಗ್ಗೆ ವಿಶ್ವಬ್ಯಾಂಕ್ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಕಾರ್ಯಕ್ರಮವೂ ಇತ್ತು. ಆದರೆ, ಬೆಂಗಳೂರಿನಲ್ಲಿ ಅಕ್ಟೋಬರ್ ಒಳಗೆ ಮಿನಿ ಫ್ಲೈಓವರ್ಗಳ ನಿರ್ಮಾಣ, ಗ್ರೇಡ್ ಸಪರೇಟರ್ಸ್ ಹಾಗೂ ವಿದ್ಯುತ್ ವಲಯದ ಸುಧಾರಣೆಯ ಹಿನ್ನೆಲೆಯಲ್ಲಿ ಈ ಪ್ರವಾಸ ರದ್ದು ಮಾಡುವುದು ಅನಿವಾರ್ಯವಾಯಿತು ಎಂದು ಕೃಷ್ಣ ಹೇಳಿದ್ದಾರೆ.
ಮೂಲಭೂತ ಸೌಕರ್ಯಗಳ ಯೋಜನೆ ಕಾರ್ಯಗತವಾದ ಬಳಿಕ ಅಂದರೆ ನಾಲ್ಕು ತಿಂಗಳ ನಂತರ ಮತ್ತೆ ಇದೇ ನಿಯೋಗದೊಂದಿಗೆ ಅಮೆರಿಕಾ ಪ್ರವಾಸ ಕೈಗೊಳ್ಳುವ ಉದ್ದೇಶಿತ ಯೋಜನೆಗೆ ಪುನರ್ಚಾಲನೆ ನೀಡುವ ಇಂಗೀತವನ್ನೂ ಅವರು ವ್ಯಕ್ತಪಡಿಸಿದ್ದಾರೆ.