ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೀಡಾ ಸಚಿವೆ ಉಮಾಭಾರತಿ ಕೆಂಗಣ್ಣು ! ತಲೆಬಿಸಿಯಲ್ಲಿ ಬಿಸಿಸಿಐ

By Staff
|
Google Oneindia Kannada News

ನವದೆಹಲಿ : ಭಾರತ- ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್‌ ಆಟಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಪ್ರಾರಂಭವಾಗಿದೆ.

ಏಷ್ಯಾ ಟೆಸ್ಟ್‌ ಚಾಂಪಿಯನ್‌ಷಿಪ್‌ ಪ್ರಯುಕ್ತ , ಪಾಕಿಸ್ತಾನ ನೆಲದಲ್ಲಿ 12 ವರ್ಷಗಳ ನಂತರ ಆತಿಥೇಯರ ವಿರುದ್ಧ ಟೆಸ್ಟ್‌ ಪಂದ್ಯವಾಡಲು ಸಿದ್ಧ ಎಂದು ಬಿಸಿಸಿಐ ಘೋಷಿಸಿದ 24 ಗಂಟೆಗಳೊಳಗಾಗಿ (ಮಂಗಳವಾರ)‘ ಬಿಸಿಸಿಐನದು ಅತಿಯಾಯಿತು’ ಎಂದು ಕೇಂದ್ರ ಕ್ರೀಡಾಸಚಿವೆ ಉಮಾ ಭಾರತಿ ಕೆಂಡಾ ಮಂಡಲವಾಗಿದ್ದಾರೆ. ಇದರಿಂದಾಗಿ ಬಿಸಿಸಿಐ ಯಾವ ತೀರ್ಮಾನಕ್ಕೂ ಬರಲಾಗದೆ ಗೊಂದಲಕ್ಕೆ ಬಿದ್ದಿದೆ.

ನಮಗೀಗ ಏನು ಮಾಡಬೇಕೆನ್ನುವುದೇ ತೋಚುತ್ತಿಲ್ಲ . ಪಾಕಿಸ್ತಾನದಲ್ಲಿ ಆಡುವ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಬಿಸಿಸಿಐನ ಹಿರಿಯ ಅಧಿಕಾರಿಯಾಬ್ಬರು. ನಿಯಮಗಳ ಪ್ರಕಾರ- ಪಾಕಿಸ್ತಾನ ಹಾಗೂ ಭಾರತ ತಂಡಗಳ ನಡುವೆ ಸೆಪ್ಟಂಬರ್‌ 13 ರಿಂದ 17 ರವರೆಗೆ ಲಾಹೋರ್‌ ಅಥವಾ ಕರಾಚಿಯಲ್ಲಿ ಪಂದ್ಯ ನಡೆಯಬೇಕಾಗಿತ್ತು . ಈ ಕುರಿತಂತೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ)ನೊಂದಿಗೆ ಒಪ್ಪಂದಕ್ಕೂ ಬಿಸಿಸಿಐ ಬಂದಿದೆ. ಆದರೆ, ಬಿಸಿಸಿಐ ನಿರ್ಣಯದ ವಿರುದ್ಧವೀಗ ಉಮಾಭಾರತಿ ಗನ್ನು ಹಿಡಿದಿದ್ದಾರೆ.

ಬಿಸಿಸಿಐ ಸ್ವೇಚ್ಛಾಚಾರ ಅತಿಯಾಯಿತೆ ? : ಆಸ್ಟ್ರೇಲಿಯಾದ ಒಳಾಂಗಣ ಕ್ರಿಕೆಟ್‌ ಬದಲು ಪಾಕಿಸ್ತಾನದಲ್ಲಿ ಟೆಸ್ಟ್‌ ಆಡುವುದಾಗಿ ಸೋಮವಾರ ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಪ್ರಕಟಿಸಿದ್ದರು. ಈ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾಸಚಿವೆ ಉಮಾ ಭಾರತಿ- ‘ಇಷ್ಟೊಂದು ಸ್ವಾತಂತ್ರ್ಯವನ್ನು ಬಿಸಿಸಿಗೆ ಕೊಟ್ಟವರ್ಯಾರು ? ಆಟವಾಡಲು ಒಪ್ಪಿಗೆ ಪಡೆಯುವ ಮುನ್ನ ಕೇಂದ್ರ ಕ್ರೀಡಾ ಸಚಿವಾಲಯದ ಒಪ್ಪಿಗೆ ಪಡೆಯಬೇಕು. ಆ ಪ್ರಸ್ತಾವನೆ ವಿದೇಶಾಂಗ ಸಚಿವಾಲಯದ ಒಪ್ಪಿಗೆಯನ್ನೂ ಪಡೆಯಬೇಕು. ಇದ್ಯಾವುದೂ ಇಲ್ಲದೆ ನೇರವಾಗಿ ಆಟವಾಡುತ್ತೇವೆಂದು ಪ್ರಕಟಿಸಲು ಬಿಸಿಸಿಐಗೆ ಸ್ವಾತಂತ್ರ್ಯ ಕೊಟ್ಟವರ್ಯಾರು ?’ ಎನ್ನುತ್ತಾರೆ.

ಸಚಿವರ ಕೋಪದಿಂದ ಬಿಸಿಸಿಐ ಕಂಗಾಲಾಗಿರುವುದಂತೂ ನಿಜ. ಕೈ ಸುಟ್ಟುಕೊಳ್ಳಲು ಇಷ್ಟಪಡದ ಬಿಸಿಸಿಐ ಅಧಿಕಾರಿಗಳು, ಎಸಿಸಿಯಾಂದಿಗೆ ಒಪ್ಪಂದಕ್ಕೆ ಬಂದಿರುವುದರಿಂದ ಮಾತ್ರ ನಾವು ಆಟವಾಡಲು ಒಪ್ಪಿಗೆ ನೀಡಬೇಕಾಯಿತು ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಅಭ್ಯಂತರವಿಲ್ಲವೆನ್ನುವ ಇಂಗಿತವನ್ನು ಸೋಮವಾರವಷ್ಟೇ ವಿದೇಂಶಾಂಗ ಸಚಿವ ಜಸ್ವಂತ್‌ ಸಿಂಗ್‌ ವ್ಯಕ್ತಪಡಿಸಿದ್ದರು. ಪ್ರಸ್ತುತದ ಏಷ್ಯಾ ಕಪ್‌- ಭಾರತ, ಪಾಕ್‌ ಮಾತ್ರವಲ್ಲದೆ ಶ್ರೀಲಂಕಾ, ಬಾಂಗ್ಲಾ ದೇಶಗಳು ಕೂಡ ಭಾಗವಹಿಸುವ ಚಾಂಪಿಯನ್‌ಷಿಪ್‌ ಆಗಿದೆ ಎನ್ನುವ ವಾದವನ್ನು ಕೂಡ ಬಿಸಿಸಿಐ ಅಧಿಕಾರಿಗಳು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಇವೆಲ್ಲವುಗಳ ಹೊರತಾಗಿ, ಉಭಯ ರಾಷ್ಟ್ರಗಳು ಕ್ರಿಕೆಟ್‌ ಆಡುವ ವಿಷಯವನ್ನು ಬಿಸಿಸಿಐ ಹಾಗೂ ಕೇಂದ್ರ ಸರ್ಕಾರ ಬೇರೆ ಬೇರೆ ಕಾರಣಗಳಿಗಾಗಿ ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಂಡಿವೆ ಎನ್ನುವುದನ್ನೂ ಮರೆಯಬಾರದು. ಇದರಿಂದಾಗಿ ಸೊರಗುತ್ತಿರುವುದು ಇವರಿಬ್ಬರೂ ಅಲ್ಲ - ಕ್ರಿಕೆಟ್‌.

(ಎಎಫ್‌ಪಿ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X