ಕೇರಳದ ಸಚಿವರಿಂದ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ
ತಿರುವನಂತಪುರಂ : ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರಂನಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದ ಮುಸ್ಲಿಂ ಲೀಗ್ನ ನಾಯಕ ಚೆರುಕುಲಂ ಅಬ್ದುಲ್ಲಾ ಅವರು ಶನಿವಾರ ಬೆಳಗ್ಗೆ 12-30ರಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಕನ್ನಡದಲ್ಲಿ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಕನ್ನಡಾಭಿಮಾನ ಮೆರೆದರು.
ಕೇರಳ ಭಾರತೀಯ ಜನತಾಪಕ್ಷದ ಅಧ್ಯಕ್ಷ ಸಿ.ಕೆ. ಪದ್ಮನಾಭನ್ ಅವರನ್ನು ಸೋಲಿಸಿ ವಿಜಯಿಯಾಗಿದ್ದ ಅಬ್ದುಲ್ಲಾ ಅವರು, ಎ.ಕೆ. ಆ್ಯಂಟನಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಶನಿವಾರ ಅಧಿಕಾರ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರದ ಪ್ರಮಾಣ ವಚನವನ್ನು ಮಲೆಯಾಳಂನಲ್ಲೂ ಗೌಪ್ಯತೆಯ ಪ್ರಮಾಣವನ್ನು ಕನ್ನಡದಲ್ಲೂ ಸ್ವೀಕರಿಸಿದರು.
ಯುಡಿಎಫ್ ಮೈತ್ರಿಕೂಟವಾದ ಮುಸ್ಲಿಂ ಲೀಗ್ನ ಅಬ್ದುಲ್ಲಾ ಅವರೊಂದಿಗೆ ಇತರ 12 ಮಂದಿ ಶಾಸಕರೂ ಶನಿವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಎ.ಕೆ. ಆ್ಯಂಟನಿ ಅವರ ಸಚಿವ ಸಂಪುಟದಲ್ಲಿ ಸಚಿವರ ಸಂಖ್ಯೆ 20ಕ್ಕೆ ಏರಿದೆ. ಸಚಿವರುಗಳಿಗೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ.
(ಇನ್ಫೋ ವಾರ್ತೆ)