ನೌಕರರ ಸಂಖ್ಯೆ ಕಡಿತ ಮಾಡುವಕ್ರಮ ಸರಿ : ನಾರಾಯಣಮೂರ್ತಿ
ವಾಷಿಂಗ್ಟನ್ : ಭಾರತೀಯ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸಬೇಕಾದರೆ, ಅವುಗಳಿಗೂ ಅಮೆರಿಕಾ ಕಂಪನಿಗಳಂತೆಯೇ ತಮ್ಮ ನೌಕರರ ಸಂಖ್ಯೆಯನ್ನು ಕಡಿತಗೊಳಿಸುವ ಹಾಗೂ ಉತ್ಪಾದನೆ ನಿಲ್ಲಿಸುವ ಸ್ವಾತಂತ್ರ್ಯ ಇರಬೇಕು ಎಂದು ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ ಸಿಸ್ಕೋ, ಇಂಟೆಲ್, ಸನ್ ಮೈಕ್ರೋ ಸಿಸ್ಟಂಗಳು ಎಚ್1ಬಿ ವೀಸಾ ಪಡೆದು ಅಮೆರಿಕಕ್ಕೆ ಹೋದ ಸಾವಿರಾರು ಭಾರತೀಯರೂ ಸೇರಿದಂತೆ ಹಲವು ಮಾಹಿತಿ ತಂತ್ರಜ್ಞರನ್ನು ಕೆಲಸದಿಂದ ವಜಾ ಮಾಡಿರುವ ಕ್ರಮವನ್ನೂ ನಾರಾಯಣ ಮೂರ್ತಿ ಸಮರ್ಥಿಸಿಕೊಂಡಿದ್ದಾರೆ.
ಸ್ಪರ್ಧಾ ಪ್ರಪಂಚದಲ್ಲಿ ಸಂಸ್ಥೆಗಳು ಉಳಿಯಲು ಇಂತಹ ಕಠಿಣ ಕ್ರಮಗಳು ಅಗತ್ಯ ಎಂದು ನಾರಾಯಣ ಮೂರ್ತಿ ಅವರು ವಾಷಿಂಗ್ಟನ್ನಲ್ಲಿ ತಿಳಿಸಿರುವುದಾಗಿ ಕನ್ನಡದ ದಿನಪತ್ರಿಕೆಯಾಂದು ಶನಿವಾರ ವರದಿ ಮಾಡಿದೆ.
ಭಾರತದಲ್ಲಿಯೂ ನೌಕರರ ಸಂಖ್ಯೆಯನ್ನು ಕಡಿತಗೊಳಿಸುವ ಸ್ವಾತಂತ್ರ್ಯವನ್ನು ಆಯಾ ಸಂಸ್ಥೆಗಳಿಗೇ ನೀಡಬೇಕು ಎಂದಿರುವ ಮೂರ್ತಿ ಅವರು, ಅಮೆರಿಕಾ ಸಂಸ್ಥೆಗಳು ತಮ್ಮ ನೌಕರರ ಸಂಖ್ಯೆ ಕಡಿತಗೊಳಿಸಿರುವುದರಿಂದ ತಮಗೆ ನೋವಾಗಿಲ್ಲ. ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉಳಿಯಬೇಕಾದರೆ ಇದೊಂದೇ ದಾರಿ ಎಂದೂ ತಿಳಿಸಿದ್ದಾರೆ.
ಇತ್ತೀಚೆಗೆ ಭಾರತದಲ್ಲಂತೂ ಎಲೆಕ್ಟ್ರಿಕಲ್, ಸಿವಿಲ್, ಏರೋನಾಟಿಕಲ್ ಮೊದಲಾದ ಎಲ್ಲ ವಿಭಾಗಗಳ ತಜ್ಞರೂ ಸಾಫ್ಟ್ವೇರ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಇದು ಖಂಡಿತಾ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆಂದೂ ಪತ್ರಿಕೆ ಹೇಳಿದೆ.
ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಅಗತ್ಯ ಇದೆ. ನಮ್ಮ ಶೈಕ್ಷಣಿಕ ರಂಗದಲ್ಲಿ ಈವರೆಗೆ ಯಾವುದೇ ಮಹತ್ತರ ಬದಲಾವಣೆಗಳು ಆಗಿಲ್ಲ. ಅಮೆರಿಕದಲ್ಲಿರುವ ಭಾರತೀಯ ಮೂಲದ ವ್ಯಕ್ತಿಗಳ ಅನುಭವ ಹಾಗೂ ಸಹಾಯದಿಂದ ಅಮೆರಿಕದಲ್ಲಿರುವ ವಿಶ್ವವಿದ್ಯಾಲಯಗಳ ಮಾದರಿಯಲ್ಲೇ ನಮ್ಮ ಶೈಕ್ಷಣಿಕ ರಂಗವನ್ನೂ ಬದಲಾಯಿಸುವ ಅಗತ್ಯ ಇದೆ ಎಂದು 1981ರಲ್ಲಿ ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿ, ಪ್ರಸ್ತುತ ಅದರ ಅಧ್ಯಕ್ಷರಾಗಿರುವ ಮೂರ್ತಿ ಅವರು ಹೇಳಿದ್ದಾರೆ ಎಂದಿದೆ ವರದಿ.
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ