ಭೂಸೇನಾ ಕಮಾಂಡೆಂಟ್ರ ಕೋಟ್ಯಂತರ ರು. ಅಕ್ರಮ ಆಸ್ತಿ ಪತ್ತೆ
ಬೆಂಗಳೂರು : ಭೂಸೇನಾ ಕಾರ್ಯಪಡೆ ಕಮಾಂಡೆಂಟ್ ಹೆಚ್.ಸಿ. ಮಹದೇವಯ್ಯ ಅವರ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಒಂದು ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಮಂಗಳವಾರ ಸಂಜೆಯಿಂದ ಪ್ರಾರಂಭವಾಗಿರುವ ದಾಳಿಯು, ಬುಧವಾರವೂ ಮುಂದುವರಿದು, ರಾಜಧಾನಿಯ ವಿವಿಧ ಭಾಗಗಳಲ್ಲಿರುವ ಕಟ್ಟಡಗಳು, ಖಾಲಿ ನಿವೇಶನಗಳು, ಬ್ಯಾಂಕ್ ಠೇವಣಿಗಳು ಸೇರಿದಂತೆ ಮಹದೇವಯ್ಯನವರ ಆಸ್ತಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ ರಮೇಶ್ ಅವರು ದಾಳಿಯ ನೇತೃತ್ವ ವಹಿಸಿದ್ದರು.
ಮಹದೇವಯ್ಯನವರ ನಿವಾಸದಲ್ಲಿ 15 ಸಾವಿರ ರುಪಾಯಿ ನಗದು, ಅರ್ಧ ಕಿಲೋ ತೂಕದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳು ದೊರೆತಿವೆ. ಬನ್ನೇರುಘಟ್ಟ ರಸ್ತೆ ಮೈಕೋ ಲೇಔಟ್ನ 5 ನೇ ಮುಖ್ಯರಸ್ತೆಯಲ್ಲಿ 4 ಮಹಡಿಯ ಕಾಂಪ್ಲೆಕ್ಸ್ , ಮೈಕೋ ಲೇಔಟ್ನಲ್ಲಿ 2 ಮಹಡಿಯ ಕಟ್ಟಡ ಹಾಗೂ ಗೋವಿಂದರೆಡ್ಡಿ ಲೇಔಟ್, ಚಳ್ಳಕೆರೆ ಹಾಗೂ ಉತ್ತರಹಳ್ಳಿಯಲ್ಲಿ ಮಹದೇವಯ್ಯನರು ನಿವೇಶನ ಹೊಂದಿರುವುದು ಬೆಳಕಿಗೆ ಬಂದಿದೆ.
ಎಸ್ಪಿ ರಮೇಶ್ ಅವರ ನೇತೃತ್ವದಲ್ಲಿನ ದಾಳಿ ಪಡೆಯಲ್ಲಿ ಡಿವೈಎಸ್ಪಿ ನಾರಾಯಣಪ್ಪ ಜೋಯಪ್ಪ , ಪೊಲೀಸ್ ಇನ್ಸ್ಪೆಕ್ಟರ್ಗಳಾದ ವಿ.ಪಿ.ಎಂ. ಸ್ವಾಮಿ, ಕಲಂದರ್ ಹಾಗೂ ಡಿ. ನಾರಾಯಣಸ್ವಾಮಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...