ಏಡ್ಸ್ ತಡೆಗೆ ಉಚಿತವಾಗಿರಿಟ್ರೋವೈರಲ್ ನೀಡಿ : ಕೃಷ್ಣ ಒತ್ತಾಯ
ನವದೆಹಲಿ : ಏಡ್ಸ್ ರಿಟ್ರೇವೈರಲ್ ನಾಶಕಾರಿ ಔಷಧಿಯನ್ನು ರಾಜ್ಯಕ್ಕೆ ಉಚಿತವಾಗಿ ಪೂರೈಸಿ, ಬಡಬಗ್ಗರ ಕೈಗೂ ಎಟುಕುವಂತೆ ಮಾಡಬೇಕೆಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಎ.ಬಿ.ವಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಆರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿ, ಕೃಷ್ಣ ಮಾತನಾಡುತ್ತಿದ್ದರು. ಕರ್ನಾಟಕದಲ್ಲಿ ಸುಮಾರು 3 ಲಕ್ಷ ಏಡ್ಸ್ ರೋಗಿಗಳಿದ್ದಾರೆ. ರೆಟ್ರೋವೈರಲ್ ನಾಶಕಾರಿ ಔಷಧಿಯನ್ನು ಕೆಲವೇ ವೈದ್ಯಕೀಯ ಕಾಲೇಜುಗಳಿಗೆ ಪೂರೈಸಲಾಗುತ್ತಿದೆ. ಜೊತೆಗೆ ಅದು ಬಡಬಗ್ಗರ ಕೈಗೆ ಎಟುಕುತ್ತಿಲ್ಲ. ಎಲ್ಲಾ ಏಡ್ಸ್ ರೋಗಿಗಳಿಗೆ ಈ ಔಷಧಿಯನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಭಾರತದಲ್ಲಿ ಸಿಪ್ಲಾ ಔಷಧಿ ಕಂಪನಿ ಇತರೆ ಬಹುರಾಷ್ಟ್ರೀಯ ಕಂಪನಿಗಳಿಗಿಂತ ಮೂರು ಪಟ್ಟು ಕಡಿಮೆ ದರದಲ್ಲಿ ರೆಟ್ರೋವೈರಲ್ ನಾಶಕಾರಿ ಔಷಧಿಯನ್ನು ಮಾರಾಟ ಮಾಡುತ್ತಿದೆ. ಕರ್ನಾಟಕದಲ್ಲಿ ಪ್ರತಿಶತ 1ರಷ್ಟು ಮಕ್ಕಳು ತಾಯಿಯರಿಂದ ಎಚ್ಐವಿ ಸೋಂಕನ್ನು ಅಂಟಿಸಿಕೊಂಡು ಹುಟ್ಟುತ್ತಿದ್ದಾರೆ. ಇಂಥಾ ತಾಯಂದಿರಿಗಾದರೂ ರಿಟ್ರೋವೈರಲ್ ನಾಶಕಾರಿ ಔಷಧಿ ಕೊಟ್ಟಲ್ಲಿ ಮುಂದೆ ಹುಟ್ಟುವ ಮಕ್ಕಳು ಏಡ್ಸ್ ಮುಕ್ತರಾಗುವಂತೆ ಮಾಡಬಹುದಾಗಿದೆ ಎಂದರು.
ಎಲ್ಲಾ ಜಿಲ್ಲೆಗಳಲ್ಲೂ ರಕ್ತ ಪರೀಕ್ಷಾ ಘಟಕ : ಎಚ್ಐವಿ ಸೋಂಕನ್ನು ಪತ್ತೆ ಹಚ್ಚಲು ಅಗತ್ಯ ರಕ್ತ ಪರೀಕ್ಷೆಗಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಘಟಕಗಳನ್ನು ತೆರೆಯಲು ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಬೇಕು. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ಕೊಟ್ಟ ವಿಶ್ವಬ್ಯಾಂಕ್ ಅಧ್ಯಕ್ಷರೂ ಏಡ್ಸ್ ನಿರ್ಮೂಲನೆಗೆ ಒಲವು ತೋರಿದ್ದು, ಕೇಂದ್ರ ಮನಸ್ಸು ಮಾಡಿದಲ್ಲಿ ವಿಶ್ವಬ್ಯಾಂಕ್ ನೆರವನ್ನೂ ಪಡೆಯಬಹುದು. ರಾಜ್ಯದಲ್ಲಿ ಕೇವಲ 5 ಜಿಲ್ಲೆಗಳಲ್ಲಿ ಮಾತ್ರ ರಕ್ತ ಪರೀಕ್ಷಾ ಘಟಕಗಳಿವೆ ಎಂದು ಕೃಷ್ಣ ವಿವರಿಸಿದರು.
ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಮುಖ್ಯಮಂತ್ರಿಗಳೂ ಸಭೆಯಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)