ಮಂಗ ಮಾನವ : ಮನ ಶಾಸ್ತ್ರಜ್ಞರಿಗೆ ದೆಹಲಿ ಪೊಲೀಸರ ಮೊರೆ
ನವದೆಹಲಿ : ದಿನೇ ದಿನೇ ಕಗ್ಗಂಟಾಗುತ್ತಿರುವ ಮಂಗ ಮಾನವನ ರಹಸ್ಯವನ್ನು ಬಿಡಿಸುವಲ್ಲಿ ತೊಂದರೆ ಎದುರಿಸುತ್ತಿರುವ ರಾಜಧಾನಿಯ ಪೊಲೀಸರು, ಅಪರಾಧಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಮನಶಾಸ್ತ್ರಜ್ಞರು ಹಾಗೂ ಸಿಎಫ್ಎಸ್ಎಲ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೆರವನ್ನು ಪಡೆಯಲು ಉದ್ದೇಶಿಸಿದ್ದಾರೆ.
ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸಸ್ನ ತಜ್ಞರು ಹಾಗೂ ಪ್ರಸಿದ್ಧ ವೈದ್ಯರು ಸೇರಿದ ತಂಡವೊಂದನ್ನು ರಚಿಸಿ, ಮಂಗ ಮಾನವನ ದಾಳಿಗೆ ತುತ್ತಾದವರ ಗಾಯಗಳ ಬಗ್ಗೆ ಅಭಿಪ್ರಾಯ ಕೋರಲಾಗುವುದು ಎಂದು ದೆಹಲಿ ವಲಯದ ಸಹ ಪೊಲೀಸ್ ಆಯುಕ್ತ ಸುರೇಶ್ ರೈ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಗಾಯಗಳ ಬಗೆಗಿನ ತಜ್ಞರ ಅಭಿಪ್ರಾಯ ಸಹಕಾರಿಯಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಈ ನಡುವೆ, ಮಂಕಿ ಫೋಬಿಯಾ ದೆಹಲಿಯ ನಾಗರಿಕರಲ್ಲಿ ಮುಂದುವರಿದಿದ್ದು , ಪೊಲೀಸರಿಗೆ ಬರುವ ಸುಳ್ಳು ಕರೆಗಳೂ ಮುಂದುವರಿದಿವೆ. ಸುಳ್ಳು ಕರೆಗಳನ್ನು ಮಾಡುವುದರಲ್ಲಿ ತೊಡಗಿದ್ದ 8 ಮಂದಿಯನ್ನು ಭಾನುವಾರ ರಾತ್ರಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗ ಮಾನವನ ಬಗ್ಗೆ ವದಂತಿಗಳನ್ನು ಹಬ್ಬಿಸುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...