ಆಮದು ನಿರ್ಬಂಧ ಸಡಿಲಿಕೆಗೆ ಗೋಡಂಬಿ ಉತ್ಪಾದಕರ ಆಗ್ರಹ
ಮಂಗಳೂರು : ಕರಾವಳಿಯ ಕೈಗಾರಿಕೆಗಳು ಒಂದರ ಹಿಂದೆ ಮತ್ತೊಂದರಂತೆ ಸಮಸ್ಯೆಗಳನ್ನು ಎದುರಿಸುತ್ತಿವೆ. ಕುಸಿಯುತ್ತಿರುವ ಅಡಿಕೆ ದರ, ಬಾಗಿಲು ಮುಚ್ಚುತ್ತೇವೆ ಎನ್ನುವ ಬೀಡಿ ಉದ್ಯಮ, ಎಕ್ಕುಟ್ಟಿ ಹೋಗುತ್ತಿರುವ ಹೆಂಚಿನ ಕಾರ್ಖಾನೆ ಮಾಲಿಕರು... ಇವರ ಜೊತೆಗೆ ಈಗ ಸೋತು ತಲೆ ಮೇಲೆ ಕೈ ಹೊತ್ತಿರುವ ಇನ್ನೊಂದು ಉದ್ಯಮ- ಗೋಡಂಬಿ.
ಇತರರದು ಆಮದು ನಿರ್ಬಂಧ ಸಡಿಲಿಕೆ ಹಿಂದೆಗೆದುಕೊಳ್ಳಬೇಕೆಂಬ ಒತ್ತಾಯವಾದರೆ ಗೋಡಂಬಿ ಉತ್ಪಾದಕರದು ಆಮದು ನಿರ್ಬಂಧವನ್ನು ಸಡಿಲಿಸಬೇಕೆಂಬ ಆಗ್ರಹ. ಕೇಂದ್ರ ಸರಕಾರವು ಕಚ್ಚಾ ಗೇರುಬೀಜಗಳ ಆಮದನ್ನು ನಿರ್ದಿಷ್ಟ ಬಂದರುಗಳ ಮೂಲಕ ಮಾತ್ರ ಮಾಡಬೇಕು ಎಂದು ನಿರ್ಬಂಧಿಸಿದೆ. ಈ ರೂಲ್ಸ್ನ ಪ್ರಕಾರ ಕೊಚ್ಚಿನ್ ಬಂದರಿನಿಂದ ಆಮದಾದ ಕಚ್ಚಾ ಗೇರುಬೀಜವನ್ನು ಮಾತ್ರ ಕರ್ನಾಟಕದ ಗೋಡಂಬಿ ಉದ್ಯಮದವರು ಬಳಸಬೇಕಾಗುತ್ತದೆ. ಪಕ್ಕದಲ್ಲಿಯೇ ಬಂದರು ಇದ್ದರೂ ಕರ್ನಾಟಕದ ಗೋಡಂಬಿ ಉದ್ಯಮದವರಿಗೆ ಅದರಿಂದ ಚಿಕ್ಕಾಸಿನ ಪ್ರಯೋಜನ ಆಗುವುದಿಲ್ಲ.
ನಿರ್ದಿಷ್ಟ ಬಂದರಿನ ಮೂಲಕ ಮಾತ್ರ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು ಎನ್ನುವ ಕಟ್ಟಪ್ಪಣೆಯ ಲಿಸ್ಟ್ನಿಂದ ಗೋಡಂಬಿಯ ಹೆಸರನ್ನು ಕೈಬಿಡಬೇಕು. ಅಥವಾ ಕೊಚ್ಚಿನ್ ಬಂದರಿನ ಜೊತೆಗೆ ಮಂಗಳೂರು ಮತ್ತು ತೂತುಕುಡಿ ಬಂದರಿನಲ್ಲಿಯೂ ಗೋಡಂಬಿ ಆಮದಿಗೆ ಅವಕಾಶ ಕೊಡಬೇಕು ಎನ್ನುವುದು ಮಂಗಳೂರು ಗೋಡಂಬಿ ಉತ್ಪಾದಕರ ಸಂಘ (ಎಂಸಿಎಂಎ)ದ ಆಗ್ರಹ.
ಕರಾವಳಿಯಲ್ಲಿ ಬೀಡಿ ಉದ್ಯಮದಷ್ಟೇ ಗೋಡಂಬಿ ಉದ್ಯಮವೂ ಬಡ ಕುಟುಂಬಗಳನ್ನು ಪಾಲಿಸುವ ಹೊಣೆ ಹೊತ್ತಿದೆ. ಎಷ್ಟೋ ಮಾತೃ ಪ್ರಧಾನ ಕುಟುಂಬಗಳಿಗೆ ಗೋಡಂಬಿ ಉದ್ಯಮ ಆಧಾರವಾಗಿದೆ. ದಕ್ಷಿಣ ಭಾರತದ ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ಕೇರಳದ ದಕ್ಷಿಣ ಭಾಗದಲ್ಲಿ ಒಟ್ಟು ಸುಮಾರು ಆರುಲಕ್ಷ ಕುಟುಂಬಗಳು ಗೋಡಂಬಿ ಉತ್ಪಾದನಾ ಕಾರ್ಖಾನೆಗಳನ್ನು ಅವಲಂಬಿಸಿವೆ.
ಗೋಡಂಬಿ ಕಾರ್ಖಾನೆಗಳಲ್ಲಿ ಕಚ್ಚಾ ಗೇರುಬೀಜದ ಸಿಪ್ಪೆ ಸುಲಿಯುವ ಕಾರ್ಯದ ಜೊತೆಗೆ ಬೀಜದೊಳಗಿನ ಗೋಡಂಬಿಯನ್ನು ಸ್ವಚ್ಛಗೊಳಿಸುವ ಮತ್ತು ಅವುಗಳನ್ನು ಗುಣಮಟ್ಟದ ಆಧಾರದ ಮೇಲೆ ಪ್ರತ್ಯೇಕಿಸುವ ಕಾರ್ಯ ನಡೆಯುತ್ತದೆ.
(ಮಂಗಳೂರು ಪ್ರತಿನಿಧಿಯಿಂದ)