ಹಿರಿಯ ಪತ್ರಕರ್ತ ಸುರೇಂದ್ರ ದಾನಿ ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ
ಬೆಂಗಳೂರು : ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಗಣನೀಯ ಸೇವೆಗೆ ನೀಡಲಾಗುವ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಕರ್ತ ಸುರೇಂದ್ರ ದಾನಿ ಅವರಿಗೆ ಸಂದಿದೆ.
ಕಳೆದ 50 ವರ್ಷಗಳಿಂದ ದಾನಿ ಅವರು ಪತ್ರಿಕೋದ್ಯಮಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಖಾದ್ರಿ ಶಾಮಣ್ಣ ಟ್ರಸ್ಟ್ ಪ್ರಕಟಣೆ ತಿಳಿಸಿದೆ. ಹಿರಿಯ ಪತ್ರಕರ್ತ ಎಸ್. ಪಟ್ಟಾಭಿರಾಮನ್ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.
ಈ ಹಿಂದೆ ಎನ್.ಎಸ್. ಸೀತಾರಾಮ ಶಾಸ್ತ್ರೀ, ಅಮ್ಮೆಂಬಳ ಆನಂದ್, ಮಿಂಚು ಶ್ರೀನಿವಾಸ್, ದಿವಂಗತ ಸಿ.ಜಿ.ಕೆ. ರೆಡ್ಡಿ, ಬಾ.ಸು. ಕೃಷ್ಣಮೂರ್ತಿ, ಎಸ್.ವಿ. ಜಯಶೀಲರಾವ್ ಮತ್ತು ಎಂ.ಬಿ. ಸಿಂಗ್ ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪ್ರಶಸ್ತಿಯು ಹತ್ತು ಸಾವಿರ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪತ್ರಿಕೋಧ್ಯಮದ ಭೀಷ್ಮ ಎಂದೇ ಖ್ಯಾತರಾಗಿದ್ದ ಖಾದ್ರಿ ಶಾಮಣ್ಣನವರ ಜನ್ಮದಿನವಾದ ಜೂನ್ 6ರಂದು ಮೇಲುಕೋಟೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...