‘ಬಸವಣ್ಣನ ಹೆಸರಿನಲ್ಲಿ ಮಠಾಧೀಶರು ಸಂಪತ್ತು ಮಾಡುತ್ತಿದ್ದಾರೆ’
ಬೆಂಗಳೂರು : ಬಸವಣ್ಣನವರು ಗುರು ಎಂದು 12ನೇ ಶತಮಾನದ 400 ವಚನಕಾರರೇ ಒಪ್ಪಿದ್ದಾರೆ. ಇಂಥಾದರಲ್ಲಿ ಸಮಾಜದ ಕೆಲವು ಯಥಾಸ್ಥಿತಿವಾದಿಗಳು ಬಸವಣ್ಣ ಗುರು ಅಲ್ಲ, ಕೇವಲ ಭಕ್ತ ಎಂದು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ದೇಶೀಕೇಂದ್ರ ಸ್ವಾಮೀಜಿ ಸಿಡಿ ಮಾತುಗಳನ್ನಾಡಿದ್ದಾರೆ.
ಭಾನುವಾರ ರಾ-ಜಾಜಿನಗರದ ಬಸವ ಸಮಿತಿ ಆಯೋಜಿಸಿದ್ದ 2ನೇ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅವರು ಉದ್ಘಾಟನಾ ಭಾಷಣ ಮಾಡುತ್ತಿದ್ದರು. ಸಾಮಾಜಿಕ ಬದಲಾವಣೆಯನ್ನೇ ವಿರೋಧಿಸುವ ಉತ್ತರ ಕರ್ನಾಟಕದ ಕೆಲವರು ಬಸವಣ್ಣ ಗುರು ಅಲ್ಲ, ಯಃಕಶ್ಚಿತ್ ಒಬ್ಬ ಭಕ್ತ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಸವಣ್ಣನವರನ್ನೇ ಗುರು ಅಲ್ಲ ಅನ್ನುವುದಾದರೆ, ಜಗತ್ತಿನಲ್ಲಿ ಬೇರಾವ ಗುರುವೂ ಇಲ್ಲ. ಈ ಅಪಪ್ರಚಾರದ ನಡುವೆಯೂ ಅವರನ್ನು ಗುರು ಎಂದು ನಂಬಿರುವ ಲಕ್ಷಾಂತರ ಮಂದಿ ಇದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಪುರೋಹಿತಶಾಹಿಯನ್ನು ಧಿಕ್ಕರಿಸಿದ ಮೊದಲಿಗ ಬಸವಣ್ಣ. 12ನೆಯ ಶತಮಾನದಲ್ಲಿ ಅವರು ಮಠ ಕಟ್ಟಲಿಲ್ಲ, ಮತೀಯ ಪ್ರಜ್ಞೆಯನ್ನು ವಿರೋಧಿಸಿದರು. ಈಗ ಅವರ ಹೆಸರಿನಲ್ಲೇ ಬಂದವರು ಮಠ ಕಟ್ಟಿದ್ದಾರೆ. ಪುರೋಹಿತಶಾಹಿ ಮತ್ತೆ ತಲೆಯೆತ್ತುವಂತೆ ಮಾಡಿದ್ದಾರೆ. ಬಸವತತ್ವಗಳನ್ನು ಅನುಷ್ಠಾನಕ್ಕೆ ತರುವುದು ಹಾಗಿರಲಿ, ಆ ಆದರ್ಶ ಪುರುಷನ ಹೆಸರನ್ನು ಬಳಸಿ ಸಂಪತ್ತು ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಸಮ್ಮೇಳನದಲ್ಲಿ ಮಾತನಾಡಿದ ಸಾಹಿತಿ ಗೊ.ರು.ಚನ್ನಬಸಪ್ಪ ನಾಡಿನ ಬೃಹತ್ ಸಂಪತ್ತು ಜಾನಪದ, ಅದನ್ನು ರಕ್ಷಿಸುವ ಅಗತ್ಯವಿದೆ ಎಂದು ಕರೆ ಕೊಟ್ಟರು. ಶಿವಗಂಗೆ ಮೇಲಣ ಗವಿ ಮಠಾಧೀಶರಾದ ಪಟ್ಟದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಕೋ.ಚೆನ್ನಬಸಪ್ಪ ಹಾಜರಿದ್ದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...