ಸಾ.ಕೃ. ರಾಮಚಂದ್ರರಾಯರಿಗೆ ಅ.ನ.ಕೃ. ಪ್ರಶಸ್ತಿ ಪ್ರದಾನ
ಬೆಂಗಳೂರು : ಕಲೆ, ಸಾಹಿತ್ಯ ಸೇವೆಗೆ ನೀಡಲಾಗುವ ಅ.ನ.ಕೃ. ಪ್ರಶಸ್ತಿ ಯನ್ನು ಹಿರಿಯ ಮನಶ್ಶಾಸ್ತ್ರ ಪ್ರಾಧ್ಯಾಪಕ, ಬಹುಭಾಷಾ ಕೋವಿದ ಹಾಗೂ ಸಂಶೋಧಕ ಪ್ರೋ. ಸಾ.ಕೃ. ರಾಮಚಂದ್ರರಾವ್ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.
ಭಾನುವಾರ ಬೆಳಗ್ಗೆ ಬಸವನಗುಡಿ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಅ.ನ.ಕೃ. ಪ್ರತಿಷ್ಠಾನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಅವರು ಸಾಲಿಗ್ರಾಮ ಕೃಷ್ಣರಾವ್ ರಾಮಚಂದ್ರರಾವ್ ಅವರಿಗೆ ಕರ್ನಾಟಕ ಭೂಪಟವುಳ್ಳ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಹಾರನಹಳ್ಳಿ ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಾ.ಕೃ. ರಾಮಚಂದ್ರರಾವ್ ಕಿರು ಪರಿಚಯ : ಮನಶ್ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಾಯರು, ಸಂಶೋಧಕ, ವಿಚಾರವಾದಿ ಹಾಗೂ ನಿಷ್ಣಾತ ಕಲಾವಿದರು. ಭಾರತೀಯ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಅಪಾರ.
ವಿದ್ಯಾಲಂಕಾರ ಪ್ರಶಸ್ತಿಯನ್ನೂ ಪಡೆದಿರುವ ರಾಯರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೂ ಅನುಪಮ ಕೊಡುಗೆ ನೀಡಿದ್ದಾರೆ. ಚಿತ್ರಕಲೆ, ಶಿಲ್ಪಕಲೆ ಹಾಗೂ ಸಂಗೀತ ಕ್ಷೇತ್ರದಲ್ಲಿ ನೈಪುಣ್ಯತೆ ಗಳಿಸಿದ್ದಾರೆ. ವಿವಾಹ ಪದ್ಧತಿ, ಪ್ರಾಚೀನ ಸಂಸ್ಕೃತಿ, ಪರಾಮಾನಸ ಶಾಸ್ತ್ರ,, ಬೆಂಗಳೂರು ಕರಗ ಮೊದಲಾದವು ರಾಯರ ಪ್ರಮುಖ ಕೃತಿಗಳು.