ಪಾತಕ ಜಗತ್ತಿನಿಂದ ಭಾರತೀಯ ಸಿನಿಮಾ ರಕ್ಷಣೆಗೆ ಬದ್ಧ - ಸುಷ್ಮಾ
ಲಂಡನ್ : ಪಾತಕ ಜಗತ್ತಿನ ಕಪಿ ಮುಷ್ಠಿಯಿಂದ ಭಾರತೀಯ ಚಿತ್ರೋದ್ಯಮವನ್ನು ರಕ್ಷಿಸಲು ತಾವು ಕಂಕಣಬದ್ಧರಾಗಿರುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಚಿತ್ರೋದ್ಯಮದ ಉಳಿವಿಗಾಗಿ ತಾವು ಆಳವಾಗಿ ತೊಡಗಿಕೊಂಡಿರುವುದನ್ನು ಸುಷ್ಮಾ ಒತ್ತಿ ಹೇಳಿದರು. ಒಳ್ಳೆಯ ಸಿನಿಮಾಕ್ಕೂ ಹಾಗೂ ನ್ಯಾಯವಾದ ದುಡ್ಡಿಗೂ ಸಂಬಂಧವಿದೆ. ಅದೇ ರೀತಿ ಕಪ್ಪು ಹಣದಿಂದ ನಿರ್ಮಿಸಿದ ಸಿನಿಮಾಗಳು ಹಣದಂತೆಯೇ ಇರುತ್ತವೆ ಎಂದು ಅವರು ವ್ಯಂಗ್ಯವಾಡಿದರು. ಕೆನೀಸ್ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದ ನಂತರ ಲಂಡನ್ಗೆ ಆಗಮಿಸಿದ ಸಂದರ್ಭದಲ್ಲಿ ಅವರು ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಸಿನಿಮಾ ನಿರ್ಮಾಣಕ್ಕೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಸಿನಿಮಾವನ್ನು ಉದ್ಯಮವೆಂದು ಪರಿಗಣಿಸಲಾಗುವುದು. ಐಡಿಬಿಐ ಕಾಯ್ದೆಯಡಿ ಸಿನಿಮಾಗಳನ್ನು ಪರಿಗಣಿಸಲಾಗುತ್ತಿದ್ದು , ಈ ಸಿನಿಮಾಗಳಿಗೆ ಮಾತ್ರ ಹಣಕಾಸಿನ ನೆರವು ನೀಡಲಾಗುವುದು. ಸಿನಿಮಾ ನಿರ್ಮಾಪಕರಿಗೆ ನಿಧಿ ಒದಗಿಸುತ್ತಿರುವಾಗ ಅವರುಗಳು ಕಪ್ಪು ಹಣದ ಹಿಂದೆ ಓಡುವುದು ಏಕೆಂದು ಸುಷ್ಮಾ ಪ್ರಶ್ನಿಸಿದರು.
ಮೂರು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಸುಷ್ಮಾ , ಬಿಬಿಸಿಯ ಕಾರ್ಯಾಚರಣೆಯನ್ನು ಅರಿಯುವ ಕುರಿತು ಸಭೆಯಾಂದರಲ್ಲಿ ಭಾಗವಹಿಸುವರು. ಸಾರ್ವಜನಿಕ ವಲಯದ ಮಾಧ್ಯಮಗಳಿಗೆ ಬಿಬಿಸಿ ಆದರ್ಶ ಪ್ರಾಯವಾಗಿದೆ ಎಂದು ಅವರು ಬಣ್ಣಿಸಿದರು.
(ಇನ್ಫೋ ವಾರ್ತೆ)