ಹೆಣ್ಣು ಶಿಶು ಮಾರಾಟ : ಪರಾರಿಯಾಗಿದ್ದ ಸರಿತಾ ಸಿಐಡಿ ಬಲೆಗೆ
ಹೈದರಾಬಾದ್ : ಲಂಬಾಣಿ ಹೆಣ್ಣು ಶಿಶುಗಳ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಲೈಸೆನ್ಸ್ ರಹಿತ ದತ್ತು ಕೇಂದ್ರ, ಪ್ರಿಶಿಯಸ್ ಮೊಮನೆಂಟ್ಸ್ನ ಒಡತಿ ಅನಿತಾ ಸೇನ್ಳ ಸಹವರ್ತಿ ಸರಿತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದು, ಕಾರ್ಯಚಾರಣೆಗೆ ಹೊಸ ತಿರುವು ಸಿಕ್ಕಿದೆ.
ಲಂಬಾಣಿ ಶಿಶು ಮಾರಾಟ ಜಾಲವನ್ನು ಪೊಲೀಸರು ಬಯಲಿಗೆಳೆದಾಗಿನಿಂದ ಸರಿತಾ ಪರಾರಿಯಾದ್ದು, ಗುರುವಾರ ಆಕೆಯನ್ನು ಬಂಧಿಸುವಲ್ಲಿ ಸಿಐಡಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 24 ಗಂಟೆ ಅವಧಿಯಾಳಗೆ ಸರಿತಾಳನ್ನು ಕ್ರಿಮಿನಲ್ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ಸಿಐಡಿ ಅಧಕಾರಿ ಎಂ. ಎ. ಬಾಸಿತ್ ಹೇಳಿದ್ದಾರೆ.
ಪ್ರಸ್ತುತ, ಪ್ರಕರಣದ ಪ್ರಮುಖ ಆರೋಪಿಗಳಾದ ಅನಿತಾ ಸೇನ್ ಮತ್ತು ತಾಂಡೂರಿನ ಜಾನ್ ಅಬ್ರಹಾಂ ಸ್ಮಾರಕ ಬೆಥನಿ ಹೋಂನ ಒಡತಿ ಸಾವಿತ್ರಿದೇವಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸಾವಿತ್ರಿದೇವಿಯ ಸುಳಿವು ನೀಡಿದವರಿಗೆ ಐದು ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿದೆ.
ಮಂಗಳೂರು ವರದಿ : ಗುಲ್ಪರ್ಗಾ ಜಿಲ್ಲೆಯಲ್ಲಿ ನಡೆದ ಹೆಣ್ಣು ಮಕ್ಕಳ ಮಾರಾಟ ಪ್ರಕರಣದ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ಯಾವ ಸಚಿವರೂ ಮಾನವೀಯ ನೆಲೆಯಲ್ಲಿ ವರ್ತಿಸಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಾವೇಶದಲ್ಲಿ ಆಪಾದಿಸಲಾಗಿದೆ.
ಸಮಾವೇಶಕ್ಕೆ ಆಗಮಿಸಿದ್ದ ಗುಲ್ಬರ್ಗಾ ಪ್ರತಿನಿಧಿ ಮತ್ತು ಸಂಘಟನೆಯ ಕಾರ್ಯಕರ್ತೆ ಸೌಭಾಗ್ಯ ಎಂಬಾಕೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, , ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಶಿಶು ಮಾರಾಟಕ್ಕೆ ಸಂಬಂಧಿಸಿ ಜನರು ಸಲ್ಲಿಸಿದ ಮನವಿಯನ್ನು ಅಲ್ಲಿಯೇ ಬಿಟ್ಟು ಹೋಗಿ ಬೇಜವಾಬ್ದಾರಿ ತೋರಿಸಿದ್ದಾರೆ ಎಂದರು.
ಕುಂಚಾರ ಮೇರು ಎಂಬಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಶಿಶುಗಳ ಮಾರಾಟ ನಡೆದಿದೆ. ಗುಲ್ಬರ್ಗಾ ಜಿಲ್ಲೆಯ 40 ತಾಂಡಾಗಳಲ್ಲಿ 1980 ರಿಂದಲೇ ಹೆಣ್ಣು ಶಿಶುಗಳ ಮಾರಾಟ ನಡೆದುಕೊಂಡು ಬಂದಿದೆ ಎಂದು ಅವರು ವಿವರಿಸಿದರು.
(ಇನ್ಫೋ ವಾರ್ತೆ)