‘ರಾಜ್ಯದ ಜಿಲ್ಲಾ ಪಂಚಾಯತ್ಗಳಲ್ಲಿ ದಕ್ಷಿಣ ಕನ್ನಡ ಜಿ.ಪಂ. ನಂ.1’
ಮಂಗಳೂರು : ಅಭಿವೃದ್ಧಿ ಕಾರ್ಯಗಳ ಅಳವಡಿಕೆಯಲ್ಲಿ ನೂರು ಪ್ರತಿಶತ ಯಶಸ್ಸು ಕಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರಾಜ್ಯದಲ್ಲಿಯೇ ಅತ್ಯುತ್ತಮ ಜಿಲ್ಲಾ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸದಾನಂದ ಪೂಂಜಾ ಹೇಳಿದ್ದಾರೆ.
ಭವಿಷ್ಯದ ಅಭಿವೃದ್ಧಿ ಕಾರ್ಯಗಳಿಗಾಗಿ ರಸ್ತೆಗಳ ನಕಾಶೆ ತಯಾರಿ ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ಜನರನ್ನು ತೊಡಗಿಸಿಕೊಳ್ಳುವಿಕೆ , ನಿರ್ವಹಣೆ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ನಡುವಿನ ಸಾಮರಸ್ಯದಿಂದಾಗಿ ಈ ಅಗ್ಗಳಿಕೆ ದೊರೆತಿದೆ. ಈ ಕಾರಣಗಳಿಂದಾಗಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ರಾಜ್ಯದಲ್ಲಿಯೇ ಅತ್ಯುತ್ತಮ ಜಿಲ್ಲಾ ಪಂಚಾಯತ್ ಆಗಿ ಹೊರಹೊಮ್ಮಿದೆ ಎನ್ನುವುದು ಪೂಂಜಾ ಅವರ ಸಮರ್ಥನೆ. ಅವರು ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಸಂಭ್ರಮ ಹಂಚಿಕೊಂಡರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಿಸಲು ಈಗಾಗಲೇ 149 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು , 316 ಬಾವಿಗಳ ಕೆಲಸ ಪ್ರಗತಿಯಲ್ಲಿದೆ. ಅಲ್ಲದೆ ತುರ್ತು ಕಾಮಗಾರಿಗಳಿಗಾಗಿ ಜಿಲ್ಲಾ ಪಂಚಾಯತ್ಗೆ ಒಂದು ಕೋಟಿ ರೂಪಾಯಿ ಅನುದಾನ ದೊರೆತಿದೆ ಎಂದು ಪೂಂಜಾ ಹೇಳಿದರು. ಯಾವುದೇ ಕಾಮಗಾರಿಗೆ ಬಿಡುಗಡೆಯಾದ ಹಣ ಪೋಲಾಗದಂತೆ ಪಂಚಾಯತ್ ನೋಡಿಕೊಂಡಿರುವುದೂ ಈ ಅಗ್ಗಳಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ರಾಜೀವ್ಗಾಂಧಿ ಕುಡಿಯುವ ನೀರಿನ ಯೋಜನೆಗಾಗಿ ಗ್ರಾಮ ಸಭೆಗಳಿಂದ 74 ಲಕ್ಷ ರೂ. ಸಂಗ್ರಹಿಸಿದ ಜಿಲ್ಲಾ ಪಂಚಾಯತ್ ನಿರ್ವಹಿಸಿರುವ ರಸ್ತೆ ಕಾಮಗಾರಿ, ಸೇತುವೆಗಳ ನಿರ್ಮಾಣ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಡೆಸಿರುವ ಅಭಿವೃದ್ಧಿ ಕಾರ್ಯಗಳ ಕುರಿತೂ ಈ ಸಂದರ್ಭದಲ್ಲಿ ಪೂಂಜಾ ವಿವರಿಸಿದರು.
(ಇನ್ಫೋ ವಾರ್ತೆ)