ಮೇಲ್ಮನೆ ಸದಸ್ಯರ ಆಯ್ಕೆ ರದ್ದು ತೀರ್ಪಿಗೆ ಸುಪ್ರೀಂಕೋರ್ಟ್ ತಡೆ
ಬೆಂಗಳೂರು : ತಮ್ಮ ಹಾಗೂ ಇತರ 10 ವಿಧಾನಪರಿಷತ್ ಸದಸ್ಯರ ಅವಿರೋಧ ಆಯ್ಕೆಯನ್ನು ರದ್ದು ಪಡಿಸಿ, ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ ಎಂದು ರಾಜ್ಯ ಶಿಕ್ಷಣ ಸಚಿವೆ ನಫೀಸಾ ಫಜಲ್ ಶನಿವಾರ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಈ ತಡೆಯಾಜ್ಞೆಯಿಂದಾಗಿ ತಮಗೆ ಆರಂಭಿಕ ಗೆಲವು ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ತಡೆಯಾಜ್ಞೆ ದೊರೆತಿರುವುದು ಬಹಳ ಪ್ರಮುಖ ವಿಷಯ, ಕಾರಣ ನ್ಯಾಯಾಲಯ ಕಲಾಪಕ್ಕೆ ಇಂದೇ ಕೊನೆಯ ದಿನ. ಭಾನುವಾರದಿಂದ ನ್ಯಾಯಾಲಯಕ್ಕೆ ಬೇಸಿಗೆ ರಜೆ ಆರಂಭವಾಗಲಿದೆ ಎಂದೂ ಅವರು ಹೇಳಿದರು.
ಕಳೆದ ಜೂನ್ 3ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗಿದ್ದ 11 ಸದಸ್ಯರ ಆಯ್ಕೆಯನ್ನು ರದ್ದು ಪಡಿಸಿ ರಾಜ್ಯ ಹೈಕೋರ್ಟ್ ಏಪ್ರಿಲ್ 20ರ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿತ್ತು. ತಮ್ಮ ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ವಾಟಾಳ್ ನಾಗರಾಜ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು.
ಹೈಕೋರ್ಟ್ನ ಈ ತೀರ್ಪಿನಿಂದಾಗಿ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವೆ ನಫೀಸಾ ಫಜಲ್, ಭಾರತೀಯ ಜನತಾಪಕ್ಷದ ಮುಖಂಡ ಬಿ.ಎಸ್. ಯಡಿಯೂರಪ್ಪ, ಸಂಯುಕ್ತ ಜನತಾದಳದ ಎಂ.ಪಿ. ಪ್ರಕಾಶ್, ರಾಜಶೇಖರನ್, ಮಾಜಿ ಸಂಸದ ಮಾರುತಿರಾವ್ ಮಾಲೆ, ಲೇಔಟ್ ಕೃಷ್ಣಪ್ಪ, ಕರಿಯಣ್ಣ ಸಂಗಟಿ, ವಿ.ಆರ್. ಸುದ-ರ್ಶ-ನ್, ವಿನ್-ಫ್ರೆ-ಡ್ ಡಿಸೋ-ಜಾ, ಜಲ-ಜಾ ನಾಯ-ಕ್ ಹಾಗೂ ವಿಮಲಾಗೌಡ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಹತ್ತು ಮಂದಿ ಸದಸ್ಯರು ಮೇ 3ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾಮೂಹಿಕವಾಗಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ನ್ಯಾಯಪೀಠ ಈ ತಡೆಯಾಜ್ಞೆ ನೀಡಿದ್ದು, ರಜೆಯ ನಂತರ ವರಿಷ್ಠ ನ್ಯಾಯಮೂರ್ತಿಗಳಿಗೆ ಅರ್ಜಿಯನ್ನು ಪರಿಶೀಲಿಸುವಂತೆ ಮನವಿ ಮಾಡಬಹುದು ಎಂದೂ ಸೂಚಿಸಿದೆ.
(ಇನ್ಫೋ ವರದಿ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...