ನಿನ್ನಿಂದಲೇ ಇದೆಲ್ಲಾ ರಾಮಾಯಣ ! ಬಂದು ಬಿಡು..
ಇದೆಂಥಾ ಬಿಸಿಲು ! ಈ ಹೊತ್ತು ರಾಜ್ಯಾದ್ಯಂತ ಜನ ಮಾತಾಡಿಕೊಳ್ಳುತ್ತಿರುವ ವಿಷಯ ಇದೇನೆ. ಬೆಟ್ಟವನ್ನಾದರೂ ಕಿತ್ತಿಟ್ಟೇನು ಎನ್ನುವ ಹುಮ್ಮಸ್ಸಿನ ಪಡ್ಡೆ ಹುಡುಗರನ್ನೂ ಸುಸ್ತು ಮಾಡಿಬಿಟ್ಟಿದೆ ಬಿಸಿಲಿನ ಝಳ. ಇದು ಎಂದಿನಂತಲ್ಲದ ಬೇಸಿಗೆ, ನಾ ಹುಟ್ಟಂದಿನಿಂದ ಇಂಥಾ ಬೇಗೆಯನ್ನೇ ಕಂಡಿರಲಿಲ್ಲ ಎಂದು ಬೆಂಗಳೂರಿನಲ್ಲಿರುವ ಅಕ್ಕನಿಗೆ ಮಂಗಳೂರಿನ ಹುಡುಗ ಕಾಗದ ಬರೆಯುತ್ತಾನೆ. ಅಂಗಳದಲ್ಲಿನ ಬಾವಿ ಬತ್ತಿದೆ, ಮೀನುಗಳು ಸತ್ತಿವೆ ಎನ್ನುವ ಆತಂಕವೂ ಅಲ್ಲಿದೆ. ಎಸಿ ರೂಮಿನಲ್ಲಿ ಕೂತು ಲೊಚಗುಟ್ಟುತ್ತ ಕೆಲಸ ಮಾಡುವ ಅಕ್ಕನೋ 34 ಡಿಗ್ರಿ ಸೆಲ್ಷಿಯಸ್ ಆಸುಪಾಸಿನ ಉಷ್ಣಾಂಶಕ್ಕೇ ಅಲ್ಲಾಡಿ ಹೋಗಿದ್ದಾಳೆ.
ಈ ನಡುವೆ ಬೆಂಗಳೂರಿನ ನಿವಾಸಿಗಳು- ತಾಳಲಾರೆವು ಈ ಬಿಸಿಲು ಎಂದು ಅಲವತ್ತುಕೊಳ್ಳುತ್ತಿದ್ದರೆ- ಬೆಂಗಳೂರಿಗಿಂತ ಯಾವತ್ತೂ 10 ಡಿಗ್ರಿ ಸೆಲ್ಷಿಯಸ್ ಅಧಿಕ ಉಷ್ಣಾಂಶ ದಾಖಲಿಸುವ ಗುಲ್ಬರ್ಗಾದ ಜನ ಬರಲಿರುವ ದಿನಗಳ ಬಗ್ಗೆ ಚಿಂತಿತರಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ, ಬಿಸಿಲು ಜನರ ಚೈತನ್ಯವನ್ನು ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ, ಅದೇರೀತಿ ಆಸ್ಪತ್ರೆಯ ಮುಂದಿನ ಸಾಲುಗಳನ್ನು ಹೆಚ್ಚಿಸುವಲ್ಲಿ .
ಇಷ್ಟೆಲ್ಲಾ ರಾಮಾಯಣಕ್ಕೆ ಕಾರಣ ಯಾರೆಂದು ಹುಡುಕುತ್ತಾ ಹೋದರೆ, ಬಡಪೆಟ್ಟಿಗೇ ಎದುರಾಗುತ್ತದೆ ಮಳೆ ಎನ್ನುವ ಮಾಯಾಂಗನೆಯ ಹೆಸರು. ರಾಜ್ಯದ ಆಕಾಶದಿಂದ ಅವಳು ಮರೆಯಾದದ್ದೇ ಇದೆಲ್ಲಾ ಆತಂಕ, ಅವಾಂತರಕ್ಕೆ ಕಾರಣ. ಅವಳಾದರೂ ಎಷ್ಟು ದಿನ ಮರೆಯಾದಾಳು ? ಜೂನ್ ಹತ್ತಿರವಾಗುತ್ತಿದೆಯಲ್ಲವೇ ? ಮುಂಗಾರಿನ ಕನಸುಗಳು ಬೀಳುತ್ತಿವೆಯೇ ?