ನಮ್ಮಂಥ ಕಂಪನಿಗಳಿಗೆ ತೆರಿಗೆ ವಿಧಿಸಿ- ಇನ್ಫೋಸಿಸ್ ನಾರಾಯಣ ಮೂರ್ತಿ
ನವದೆಹಲಿ : ರಫ್ತು ಮಾಡುವ ಎಲ್ಲಾ ಸಾಫ್ಟ್ವೇರ್ ಕಂಪನಿಗಳ ಮೇಲೆ ಸರ್ಕಾರ ತೆರಿಗೆ ವಿಧಿಸಬೇಕು. ಹಣ ಮಾಡುವವರಿಂದ ತೆರಿಗೆ ಪಡೆದು, ಅದನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿನಿಯೋಗಿಸುವುದೇ ಸೂಕ್ತ . ನಮ್ಮಂಥವರ ಕಂಪನಿಗಳ ಮೇಲೆ ತೆರಿಗೆ ವಿಧಿಸಬೇಕು ಎಂದು ಇನ್ಫೋಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಾವೆಲ್ಲಾ ದುಡ್ಡು ಮಾಡುತ್ತಿರುವಾಗ ಸರ್ಕಾರ ಸುಮ್ಮನೆ ಬಿಡಬಾರದು. ತೆರಿಗೆ ವಸೂಲು ಮಾಡಬೇಕು. ಹಣ ಮಾಡುವ ನಾವು ತೆರಿಗೆ ಕಟ್ಟದಿದ್ದರೆ ಅದು ನಮಗೇ ಸರಿ ಬೀಳದು. ಈ ಮಾತನ್ನು ಕಾರ್ಪೊರೇಟ್ ಜಗತ್ತಿನಲ್ಲಿ ನಾನೊಬ್ಬನೇ ಹೇಳುತ್ತಿರುವುದರಿಂದ ಇಲ್ಲಿ ನಾನು ಅನ್ಪಾಪ್ಯುಲರ್ ಎಂದು ನಾರಾಯಣ ಮೂರ್ತಿ ಹೇಳಿದರು.
ಸರ್ಕಾರ ಹೇಳಿದೆ- ಸಾಫ್ಟ್ವೇರ್ ಕಂಪನಿಗಳ ಮೇಲೆ 2009ರಲ್ಲಿ ತೆರಿಗೆ ಹೇರುವುದರ ಬಗ್ಗೆ ಯೋಚಿಸಲಾಗುವುದು ಎಂದು. ಆ ಕಾಲ ಬರುವ ಹೊತ್ತಿಗೆ ಕಾರ್ಪೊರೇಟ್ ಜಗತ್ತು ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ತಂದು ತೆರಿಗೆ ಹೇರುವ ಕಾಲವನ್ನು 2099ಕ್ಕೆ ಮುಂದೂಡಿದರೂ ಆಶ್ಚರ್ಯವಿಲ್ಲ . ಇತರೆ ಉದ್ದಿಮೆಗಳಿಗೆ ಅನ್ವಯಿಸುವ ತೆರಿಗೆ ನೀತಿ ಸಾಫ್ಟ್ವೇರ್ ಕಂಪನಿಗಳಿಗೆ ಯಾಕೆ ಕೂಡದು ? ತೆರಿಗೆ ವಿಧಿಸುವುದರಿಂದ, ಭಾರತದ ಹೊರಗೆ ತೆರಿಗೆ ಕಟ್ಟುತ್ತಿರುವ ಇಲ್ಲಿನ ಕಂಪನಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
ಸರ್ಕಾರ ವರ್ಸಸ್ ನಾರಾಯಣ ಮೂರ್ತಿ : ದೇಶದ ಮೂಲೆಮೂಲೆಗೂ ತಂತ್ರಜ್ಞಾನ ಕೊಂಡೊಯ್ಯುವುದೇ ನನ್ನ ಉದ್ದಿಶ್ಯ. ನಮ್ಮ ದೇಶಕ್ಕೆ ಇತರೆ ದೇಶಗಳಿಗಿಂತ ತಂತ್ರಜ್ಞಾನದ ಅಗತ್ಯವೂ ಹೆಚ್ಚಾಗೇ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ನನ್ನ ನಡುವೆ ಯುದ್ಧ ನಡೆಯುತ್ತಲೇ ಇದೆ ಎಂದು ನಾರಾಯಣ ಮೂರ್ತಿ ಭಾವುಕ ಮಾತುಗಳನ್ನಾಡಿದರು.
ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ- ಅಕೌಂಟ್ಸ್ ರಿಸರ್ಚ್ ಫೌಂಡೇಶನ್ (ಐಸಿಎಐ-ಎಆರ್ಎಫ್) ನ ಸಂಶೋಧನಾ ಯೋಜನೆಗೆ ಗುರುವಾರ ಚಾಲನೆ ನೀಡಿ, ನಾರಾಯಣ ಮೂರ್ತಿ ಮಾತಾಡುತ್ತಿದ್ದರು. ಫೆಲೋಷಿಪ್ ಯೋಜನೆಗಳ ಒಡಂಬಡಿಕೆಗೆ ಐಸಿಎಐ ಅಧ್ಯಕ್ಷ ಮೂರ್ತ್ಯಾನಂದ್ ಎನ್.ಡಿ.ಗುಪ್ತಾ ಸಹಿ ಹಾಕಿದರು.
ತಿಂಗಳಿಗೆ 25 ಸಾವಿರ ರು. ಸ್ಟೈಪೆಂಡ್ : ಒಪ್ಪಂದದನ್ವಯ ಇನ್ಫೋಸಿಸ್ ಸಂಸ್ಥೆ ಯೋಗ್ಯರನ್ನು ಆರಿಸಿ, ಐಸಿಎಐ-ಎಆರ್ಎಫ್ ಸಂಶೋಧನೆಗೆ ಕಳುಹಿಸಿಕೊಡುತ್ತದೆ. ಪ್ರತಿ ವರ್ಷ ನಾಲ್ಕು ಫೆಲೋಷಿಪ್ಗಳನ್ನು ಕೊಡಲಾಗುವುದು. 3 ವರ್ಷ ಕಾಲದ ಈ ಸಂಶೋಧನೆಗೆ ಪ್ರತಿ ಫೆಲೋಷಿಪ್ ಮೊತ್ತ 9 ಲಕ್ಷ ರುಪಾಯಿಯನ್ನು ಇನ್ಫೋಸಿಸ್ ನೀಡಲಿದೆ. ಫೆಲೋಷಿಪ್ಗೆ ಆಯ್ಕೆಯಾಗುವವರಿಗೆ ತಿಂಗಳಿಗೆ ತಲಾ 25 ಸಾವಿರ ರುಪಾಯಿ ಸ್ಟೈಪೆಂಡ್ ದೊರೆಯಲಿದೆ.
ಕಾರ್ಪೊರೇಟ್ ಕಾನೂನು, ಅಕೌಂಟಿಂಗ್, ಆಡಿಟಿಂಗ್, ಕ್ಯಾಪಿಟಲ್ ಮಾರ್ಕೆಟ್ಸ್, ಕಾರ್ಪೊರೇಟ್ ಆಡಳಿತ, ಮಾಹಿತಿ ತಂತ್ರಜ್ಞಾನ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಬಹುದು. ನವದೆಹಲಿಯ ಗುರು ಗೋವಿಂದ್ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಫೆಲೋಷಿಪ್ ಇದು.
ಹತ್ತು ಲಕ್ಷ ಐಟಿ ಜಾಣರು ಬೇಕು : ಈ ಯೋಜನೆ, ದೇಶಕ್ಕೆ ಇನ್ಫೋಸಿಸ್ ಸಲ್ಲಿಸುತ್ತಿರುವ ಕಿರು ಕಾಣಿಕೆ. ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗೆ ಭಾರತಕ್ಕೆ ಸಾಕಷ್ಟು ಪರಿಣತರ ಅಗತ್ಯವಿದೆ. ಅತ್ಯುತ್ತಮ ವಿದ್ಯುದಾಗಾರಗಳು, ಚೆಂದದ ಏರ್ಪೋರ್ಟ್ಗಳು, ಸೇತುವೆಗಳು, ಸಪಾಟಾದ ರಸ್ತೆಗಳು- ಇವನ್ನೆಲ್ಲಾ ತಂತ್ರಜ್ಞಾನ ಬಳಸಿಯೇ ಸಿದ್ಧಪಡಿಸಬಲ್ಲ ಐಟಿ ಜಗಜ್ಜಾಣರ ಸಂಖ್ಯೆ 2009-10ರ ಹೊತ್ತಿಗೆ 10 ಲಕ್ಷಕ್ಕೂ ಹೆಚ್ಚಾಗಬೇಕು. ಈ ಅಗತ್ಯ ನಿಗದಿತ ಸಮಯದಲ್ಲಿ ಈಡೇರದಿದ್ದರೆ ಅದೊಂದು ದುರಂತವಾಗಲಿದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯ ಪಟ್ಟರು.
(ಯುಎನ್ಐ)