ಕೃಷ್ಣ ಕಂಡಂತೆ ‘ಜಾತ್ಯತೀತ ವರ್ಸಸ್ಕೋಮುವಾದಿಗಳ ಯುದ್ಧಾರಂಭ’
ಬೆಂಗಳೂರು : ದೇಶದಲ್ಲಿ ಜಾತ್ಯತೀತ ಹಾಗೂ ಮೂಲಭೂತವಾದಿಗಳ ನಡುವಣ ಯುದ್ಧ ಪ್ರಾರಂಭವಾಗಿದ್ದು , ಐದು ರಾಜ್ಯಗಳ ಚುನಾವಣಾ ಫಲಿತಾಂಶ ಜಾತ್ಯತೀತ ರಾಜಕೀಯ ಪಕ್ಷಗಳ ಧ್ರುವೀಕರಣದ ಚಿಂತನೆಗೆ ಕಾರಣವಾಗಬಹುದೆನ್ನುವ ಅಭಿಪ್ರಾಯವನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವ್ಯಕ್ತಪಡಿಸಿದ್ದಾರೆ.
ಧ್ರುವೀಕರಣ ಹಾಗೂ ಮರು ಹೊಂದಾಣಿಕೆ ಕುರಿತ ಚರ್ಚೆಗಳು ಈಗಾಗಲೇ ಪ್ರಾರಂಭವಾಗಿವೆ. ಆದರೆ, ಈ ಚರ್ಚೆಗಳು ನಮ್ಮನ್ನು ಎತ್ತ ಒಯ್ಯುತ್ತವೆ ಅನ್ನುವುದು ಗೊತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಲ್ಪ ಬಹುಮತ ಹೊಂದಿರುವ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ, ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸನ್ನು ಜಾತ್ಯತೀತ ಜನತಾದಳ ಬೆಂಬಲಿಸುವುದು ಎಂದು ಆ ಪಕ್ಷದ ಅಧ್ಯಕ್ಷ ಎಸ್. ಸಿದ್ಧರಾಮಯ್ಯ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಕೃಷ್ಣ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ತಮಿಳುನಾಡು, ಕೇರಳ, ಪಾಂಡಿಚೆರಿಗಳಲ್ಲಿ ಮಿತ್ರ ಪಕ್ಷಗಳೊಂದಿಗೆ ಕಾಂಗ್ರೆಸ್ ಮುನ್ನಡೆ ಖಚಿತ. ಈ ರಾಜ್ಯಗಳ ಜನತೆ ಬದಲಾವಣೆ ಬಯಸಿದ್ದಾರೆ, ಇತ್ತೀಚಿನ ಚುನಾವಣಾ ಪ್ರಚಾರದಲ್ಲಿ ಈ ವಿಷಯ ತಮಗೆ ಮನದಟ್ಟಾಗಿದೆ ಎಂದು ಅವರು ಹೇಳಿದರು. ಸಿದ್ಧರಾಮಯ್ಯನವರ ಹೇಳಿಕೆಗೆ ಕಾಂಗ್ರೆಸ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ ಎಂದರು.
ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಕೇಂದ್ರ ಸರ್ಕಾರದ ಬಗೆಗೆ ಜನಾದೇಶವೇ ಎನ್ನುವ ಪ್ರಶ್ನೆಗೆ ಉತ್ತರಿಸಲು ಮುಖ್ಯಮಂತ್ರಿ ನಿರಾಕರಿಸಿದರು.
(ಯುಎನ್ಐ)