ಸಿಹಿ ಸುದ್ದಿ : ರಾಜ್ಯದಲ್ಲಿ ಹಾಲಿನ ಬೆಲೆ ಏರಿಸೋದಿಲ್ವಂತೆ
ಬೆಂಗಳೂರು : ರಾಜ್ಯದಲ್ಲಿ ಹಾಲಿನ ದರವನ್ನು ಏರಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ಎಂದು ಪಶು ಸಂಗೋಪನೆ ಹಾಗೂ ಸಕ್ಕರೆ ಖಾತೆ ಸಚಿವ ಎ. ಕೃಷ್ಣಪ್ಪ ಹೇಳಿದ್ದಾರೆ.
ಸೋಮವಾರ ಶ್ರೀಲಂಕಾದ ಪಶು ಸಂಗೋಪನೆ ಸಚಿವ ತೊಂಡಮಾನ್ರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಸಚಿವರು ರಾಜ್ಯದಲ್ಲಿ ಉತ್ಪಾದಿಸುವ ಹೆಚ್ಚುವರಿ ಹಾಲನ್ನು ಇತರೆಡೆ ಮಾರಾಟ ಮಾಡುವ ಪ್ರಯತ್ನಗಳು ಪ್ರಗತಿಯಲ್ಲಿವೆ. ಹಾಲಿನ ಉತ್ಪನ್ನಗಳನ್ನು ತಯಾರಿಸಲು ಉತ್ಪಾದಕ ವೆಚ್ಚ ಹೆಚ್ಚಾಗಿದೆಯಾದರೂ, ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹೊರಿಸಲು ಸರಕಾರ ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಷ್ಟೇ ಶ್ರೀಲಂಕಾದ ಪಶು ಸಂಗೋಪನಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ. ರಾಜ್ಯದ ಹೆಚ್ಚುವರಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಇತರೆಡೆಗಳಲ್ಲಿ ಮಾರಾಟ ಮಾಡುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಹಾಲು ಪೂರೈಕೆ ಆಗುತ್ತಿದೆ ಎಂಬುದು ಕೇವಲ ಕಟ್ಟು ಕತೆ, ವದಂತಿ ಎಂದೂ ಹೇಳಿದ ಸಚಿವರು, ಈವರೆಗೆ ಆಸ್ಟ್ರೇಲಿಯಾದಿಂದ ರಾಜ್ಯಕ್ಕೆ ಹಾಲಾಗಲೀ, ಹಾಲಿನ ಉತ್ಪನ್ನಗಳಾಗಲೀ ಬಂದಿಲ್ಲ, ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹಾಲು ಉತ್ಪಾದಕರಿಗೆ ಮನವಿ ಮಾಡಿದರು.
ಬೆಲೆ ಏರಿಕೆಯ ಶಾಕ್ನಿಂದ ತತ್ತರಿಸಿರುವ ರಾಜ್ಯದ ಜನತೆಗೆ ಬೆಲೆ ಏರದ ಹಾಲು ಕೊಂಚ ನೆಮ್ಮದಿಯ ಹೊಳೆ ಹರಿಸಬಹುದು.