ವೀರಪ್ಪನ್ ಶಿಕಾರಿಯ ವಿಷಯದಲ್ಲಿ ಉದಾಸೀನವಿಲ್ಲ : ಕೃಷ್ಣ
ಚೆನ್ನೈ : ನರಹಂತಕ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ನಡೆಯುತ್ತಲೇ ಇದೆ. ಕರ್ನಾಟಕ ಸರಕಾರ ವೀರಪ್ಪನ್ನನ್ನು ಹಿಡಿಯುವ ಪ್ರಯತ್ನಗಳನ್ನು ಕೈಬಿಟ್ಟಿಲ್ಲ. ಈ ವಿಷಯದಲ್ಲಿ ಉದಾಸೀನದ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರಕ್ಕಾಗಿ ಪಾಂಡಿಚೇರಿಯಿಂದ - ತಮಿಳುನಾಡಿಗೆ ಆಗಮಿಸಿದ್ದ ಕೃಷ್ಣ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ವೀರಪ್ಪನ್ನನ್ನು ಹಿಡಿಯಲು ನಾವು ಬದ್ಧರಾಗಿದ್ದೇವೆ. ಈ ಪ್ರಯತ್ನಗಳನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
ಆನೆಗಳ ಹತ್ಯೆ, ಶ್ರೀಗಂಧ ಕಳ್ಳತನ, ನರಹತ್ಯೆಗಳಿಂದ ಕಾಡುಗಳ್ಳ ವೀರಪ್ಪನ್ ಕರ್ನಾಟಕಕ್ಕೆ ಅಪಾರ ಹಾನಿಯನ್ನುಂಟು ಮಾಡಿದ್ದಾನೆ. ಡಾ. ರಾಜ್ಕುಮಾರ್ ಅಪಹರಣವಂತೂ ಒಂದು ಭಯಾನಕ ಅನುಭವ. ರಾಜ್ಯದ ಪಾಲಿಗೆ ಇದೊಂದು ದುಃಸ್ವಪ್ನ ಎಂದೂ ಅವರು ಹೇಳಿದರು.
ಜಂಟಿ ಕಾರ್ಯಪಡೆಯಾಂದಿಗೆ ಕರ್ನಾಟಕ ಪೊಲೀಸರು ವೀರಪ್ಪನ್ ಹಿಡಿಯಲು ಪ್ರಯತ್ನಿಸುತ್ತಲೇ ಇದ್ದಾರೆ. ದುರ್ಗಮವಾದ ಕಾಡಿನಲ್ಲಿ ಆತ ತಲೆ ಮರೆಸಿಕೊಳ್ಳುತ್ತಿದ್ದಾನೆ. ಮಳೆಯೂ ಕೂಡ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದೂ ಅವರು ಹೇಳಿದರು.