ಸದಸ್ಯತ್ವ ರದ್ದಾದ ವಿಧಾನ ಪರಿಷತ್ ಸದಸ್ಯರಿಂದ ಸಾಮೂಹಿಕ ಮೇಲ್ಮನವಿ
ಬೆಂಗಳೂರು : ತಮ್ಮ ವಿಧಾನಪರಿಷತ್ ಸದಸ್ಯತ್ವ ರದ್ದು ಪಡಿಸಿರುವ ಹೈಕೋರ್ಟ್ ತೀರ್ಪಿನ ಕ್ರಮಬದ್ಧತೆಯನ್ನು ಪ್ರಶ್ನಿಸಿ ರಾಜ್ಯ ವಿಧಾನಪರಿಷತ್ತಿನ ಹತ್ತು ಮಂದಿ ಸದಸ್ಯರು ಸಾಮೂಹಿಕವಾಗಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ಹೈಕೋರ್ಟ್ ತೀರ್ಪಿನಿಂದ ಸದಸ್ಯತ್ವ ಕಳೆದುಕೊಂಡಿರುವ 11 ಜನರ ಪೈಕಿ 10 ಜನರು ಮೇ 3ರಂದು ಮೇಲ್ಮನವಿ ಸಲ್ಲಿಸಿದ್ದು, 11ನೇ ಸದಸ್ಯರಾದ ಎಂ.ಪಿ. ಪ್ರಕಾಶ್ ಮೇಲ್ಮನವಿ ಸಲ್ಲಿಸಿದ್ದಾರೆಯೇ? ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ವಿಷಯವನ್ನು ರಾಜಶೇಖರನ್ ತಿಳಿಸಿದ್ದಾರೆ.
ತಮ್ಮ ಅರ್ಜಿಯನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ವಾಟಾಳ್ ನಾಗರಾಜ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ರಾಜ್ಯ ಉಚ್ಚ ನ್ಯಾಯಾಲಯ, ಕಳೆದ ವರ್ಷ ಜೂನ್ 3ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗಿದ್ದ 11 ಸದಸ್ಯರ ಆಯ್ಕೆಯನ್ನು ರದ್ದು ಪಡಿಸಿ ಏಪ್ರಿಲ್ 20ರ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿತ್ತು.
ಪ್ರತಿವಾದಿಗಳಿಗೆ ಮೇಲ್ಮನವಿ ಸಲ್ಲಿಸಲು 6 ವಾರಗಳ ಕಾಲಾವಕಾಶವನ್ನೂ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಸದಸ್ಯರು, ಹೈಕೋರ್ಟ್ ತೀರ್ಪಿನ ಜಾರಿಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಈ ಅರ್ಜಿಯನ್ನು ಮೇ 10 ಅಥವಾ 11ರನ್ನು ಪರಿಶೀಲಿಸುವ ಸಾಧ್ಯತೆ ಇದ್ದು, ಅರ್ಜಿ ಅಂಗೀಕರಿಸಿ, ತಡೆಯಾಜ್ಞೆ ನೀಡುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಕುತೂಹಲ ಮೂಡಿದೆ.
ನಫೀಸಾ ಫಜಲ್, ಬಿ.ಎಸ್. ಯಡಿಯೂರಪ್ಪ, ರಾಜಶೇಖರನ್, ಮಾರುತಿರಾವ್ ಮಾಲೆ, ಲೇಔಟ್ ಕೃಷ್ಣಪ್ಪ,
ಕರಿಯಣ್ಣ ಸಂಗಟಿ, ವಿ.ಆರ್. ಸುದ-ರ್ಶ-ನ್, ವಿನ್-ಫ್ರೆ-ಡ್ ಡಿಸೋ-ಜಾ, ಜಲ-ಜಾ ನಾಯ-ಕ್ ಹಾಗೂ ವಿಮಲಾಗೌಡ ಅವರು ಮಾತುಕತೆ ನಡೆಸಿ ಒಟ್ಟಾಗಿ ಮೇಲ್ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಹೂವಿನ ಹಡಗಲಿಯಲ್ಲಿರುವ ಎಂ.ಪಿ. ಪ್ರಕಾಶ್ ಏನು ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ.
(ಇನ್ಫೋ ವರದಿ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...