ಮೇ 15ರ ಶನಿವಾರ ಶರಾವತಿ ಟೇಲ್ರೇಸ್ ರಾಷ್ಟ್ರಕ್ಕೆ ಸಮರ್ಪಣೆ
ಬೆಂಗಳೂರು : 1989ರಲ್ಲಿ ಪ್ರಾರಂಭವಾದರೂ ಹಲವಾರು ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕದ ಮಹತ್ವದ ಗೇರುಸೊಪ್ಪ ಜಲ ವಿದ್ಯುತ್ ಯೋಜನೆ ಮೇ 15ರ ಮಂಗಳವಾರ ರಾಷ್ಟ್ರಕ್ಕೆ ಸಮರ್ಪಣೆ ಆಗಲಿದೆ.
15ರಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಈ ಮಹತ್ವಾಕಾಂಕ್ಷೆಯ ಯೋಜನೆಯ ಒಂದು ಮತ್ತು ಎರಡನೇ ಘಟಕಗಳನ್ನು ಉದ್ಘಾಟಿಸುತ್ತಿದ್ದಾರೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆ.ಪಿ.ಸಿ.ಎಲ್.) ಕೈಗೆತ್ತಿಕೊಂಡಿದ್ದ ಶರಾವತಿ ಟೇಲ್ರೇಸ್ ಯೋಜನೆ ಪರಿಸರವಾದಿಗಳ ಹೋರಾಟಕ್ಕೆ ತುತ್ತಾಗಿ ಭಾರಿ ವಿವಾದಕ್ಕೆ ಒಳಗಾಗಿತ್ತು.
ವಾಸ್ತವವಾಗಿ ಈ ಯೋಜನೆ ಮೇ 5ರ ಶನಿವಾರವೇ ರಾಷ್ಟ್ರಕ್ಕೆ ಅರ್ಪಣೆಯಾಗಬೇಕಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಮುಖ್ಯಮಂತ್ರಿಗಳ ಇನ್ನಿತರ ಕಾರ್ಯಕ್ರಮಗಳ ಒತ್ತಡದಿಂದಾಗಿ, ಕಾರ್ಯಕ್ರಮವನ್ನು 15ಕ್ಕೆ ಮುಂದೂಡಲಾಯಿತು.
ಈವಿಷಯವನ್ನು ಕೆಪಿಸಿಎಲ್ನ ನಿರ್ವಾಹಕ ನಿರ್ದೇಶಕ ಜ್ಯೋತಿರಾಮಲಿಂಗಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮವನ್ನು 10 ದಿನ ಮುಂದೂಡಿದ್ದು ಒಂದು ರೀತಿಯಲ್ಲಿ ವರವೇ ಆಯಿತು. ಮೇ 5ರಂದು ಕೇವಲ ಒಂದು ಘಟಕ ಮಾತ್ರ ಉದ್ಘಾಟಿಸುವ ಕಾರ್ಯಕ್ರಮ ಇತ್ತು. ಮತ್ತೊಂದು ಘಟಕ ಮೇ 30ರಂದು ಉದ್ಘಾಟನೆ ಆಗಬೇಕಿತ್ತು.
ಈ ಮುಂದೂಡಿಕೆಯ ಲಾಭ ಪಡೆದು ನಾವು ಉಳಿದ 10 ದಿನಗಳ ಅವಧಿಯಲ್ಲಿ ಮತ್ತೊಂದು ಘಟಕವನ್ನೂ ಪೂರ್ಣಗೊಳಿಸಿ, ಅಂದೇ ಎರಡೂ ಘಟಕದ ಉದ್ಘಾಟನೆ ನೆರವೇರಿಸುತ್ತಿದ್ದೇವೆ ಎಂದು ತಿಳಿಸಿದರು. ಸುಮಾರು 531 ಕೋಟಿ ರುಪಾಯಿ ವೆಚ್ಚದ 60 ಮೆಗಾ ವ್ಯಾಟ್ ಸಾಮರ್ಥ್ಯದ ನಾಲ್ಕು ಘಟಕಗಳಿಂದ 622 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುವುದು ಎಂದೂ ಅವರು ಹೇಳಿದರು.
ಈ ವಿದ್ಯುತ್ ಯೋಜನೆಯ 3 ಹಾಗೂ 4ನೇ ಘಟಕ ಅನುಕ್ರಮವಾಗಿ ಅಕ್ಟೋಬರ್ ಹಾಗೂ ಮುಂದಿನವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. 57 ಮೀಟರ್ಗಳ ಜಲಾಶಯದಲ್ಲಿ 55 ಮೀಟರ್ ಎತ್ತರದವರೆಗೆ ಸುಮಾರು 5,875 ಕ್ಯೂಬಿಕ್ ಮೀಟರ್ ನೀರು ಸಂಗ್ರಹಿಸುವ ಅವಕಾಶ ಇದೆ. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆಯ ಎಲ್ಲ ಘಟಕಗಳಿಂದ 1940 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ಉತ್ಪಾದಿಸುವ ಗುರಿ ಇದೆ ಎಂದೂ ಅವರು ತಿಳಿಸಿದರು.
ಕದ್ರಾ, ಕೊಡಸಳ್ಳಿ ವಿದ್ಯುತ್ ಯೋಜನೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಯಚೂರು ಶಾಖೋತ್ಪನ್ನ ಕೇಂದ್ರ ಯೋಜನೆಯ 7ನೇ ಘಟಕದ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಲಾಗುವುದು, ಕೇರಳದಿಂದ 5ನೇ ಘಟಕಕ್ಕಾಗಿ ತರಿಸಿಕೊಳ್ಳುತ್ತಿರುವ ಹೊಸ ಟ್ರಾನ್ಸ್ಫಾರ್ಮರ್ ಶುಕ್ರವಾರ ರಾಯಚೂರು ಶಾಖೋತ್ಪನ್ನ ಘಟಕ ತಲುಪಲಿದ್ದು, ಮೇ ಅಂತ್ಯದೊಳಗೆ ಮತ್ತೆ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದೂ ತಿಳಿಸಿದರು.
ವಿಳಂಬ : ಪರಿಸರ ವಾದಿಗಳ ಹೋರಾಟ, ನ್ಯಾಯಾಲಯದ ತಡೆಯಾಜ್ಞೆ , ಹಣದ ಕೊರತೆ ಹಾಗೂ ಮತ್ತಿತರ ಕಾರಣದಿಂದ ಜಲಾಶಯ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿರುವ ಹಿನ್ನೆಲೆಯಲ್ಲಿ 240 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಟೇಲ್ರೇಸ್ ವಿದ್ಯುತ್ ಉತ್ಪಾದನಾ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಗಿತ್ತು. ಕಳೆದ ವರ್ಷ ಮೇ ತಿಂಗಳಿನಲ್ಲಿ ಸಂಸತ್ತಿನಲ್ಲಿ ಕೇಂದ್ರ ವಿದ್ಯುತ್ ಖಾತೆ ರಾಜ್ಯ ಸಚಿವೆ ಜಯವಂತಿ ಮೆಹೆತಾ ಈ ವಿಷಯ ಪ್ರಕಟಿಸಿದ್ದರು.
ಮುಖಪುಟ / ಇವತ್ತು... ಈ ಹೊತ್ತು...