ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರಸಂಸ್ಥೆ ಚುನಾವಣೆ ಫಲಿತಾಂಶ : ಎಲ್ಲೆಡೆ ಕಾಂಗ್ರೆಸ್‌ ಮೇಲುಗೈ

By Staff
|
Google Oneindia Kannada News

ಬೆಂಗಳೂರು : ರಾಜ್ಯದ ನಾಲ್ಕು ನಗರ ಪಾಲಿಕೆ ಸೇರಿದಂತೆ ಒಟ್ಟು 148 ಸ್ಥಳೀಯ ನಗರ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಕಾಂಗ್ರೆಸ್‌ ಜಯಭೇರಿ ಬಾರಿಸುತ್ತಿದೆ. ಮಧ್ಯಾಹ್ನ 3 ಗಂಟೆವರೆಗೆ ದೊರೆತಿರುವ ಫಲಿತಾಂಶಗಳ ಪ್ರಕಾರ ಕಾಂಗ್ರೆಸ್‌ ಬಹುತೇಕ ಪುರಸಭೆ, ನಗರಸಭೆ ಹಾಗೂ ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜಾಪುರ ಪುರಸಭೆಯ 35 ಸ್ಥಾನಗಳ ಪೈಕಿ 31ರ ಫಲಿತಾಂಶ ಹೊರಬಿದ್ದಿದ್ದು 17 ಸ್ಥಾನ ಗೆದ್ದುಕೊಂಡಿರುವ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆದಿದೆ. ಮದ್ದೂರಿನಲ್ಲಿ 23 ಸ್ಥಾನಗಳ ಪೈಕಿ 17ನ್ನು ಕಾಂಗ್ರೆಸ್‌ ತನ್ನದಾಗಿಸಿಕೊಂಡಿದೆ. ಮಳವಳ್ಳಿಯಲ್ಲಿ 23 ಸ್ಥಾನಗಳ ಪೈಕಿ 14 ಕಾಂಗ್ರೆಸ್‌ ಪಾಲಾಗಿದೆ. ಪಾಂಡವಪುರದಲ್ಲಿ 17 ಸ್ಥಾನಗಳ ಪೈಕಿ 9ರಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಚೆನ್ನರಾಯಪಟ್ಟಣದಲ್ಲಿ ಕಾಂಗ್ರೆಸ್‌ 18 ಸ್ಥಾನಗಳಿಸಿದೆ.

ಶಿವಮೊಗ್ಗದ ಮಹಿಳಾ ಮೀಸಲು ಸ್ಥಾನದಲ್ಲಿ ಇಬ್ಬರು ಅಭ್ಯರ್ಥಿಗಳು ತಲಾ 541 ಮತಗಳನ್ನು ಪಡೆದ ಕಾರಣ ಮರು ಮತ ಎಣಿಕೆಗೆ ಆದೇಶ ನೀಡಲಾಗಿತ್ತು. ಆಗಲೂ ಇಬ್ಬರೂ ಸಮಾನ ಮತ ಗಳಿಸಿದ ಹಿನ್ನೆಲೆಯಲ್ಲಿ ಅಲ್ಲಿ ಲಾಟರಿ ಮೂಲಕ ಆಯ್ಕೆ ನಡೆಯಿತು. ಈ ಹೋರಾಟದಲ್ಲಿ ಅನ್ನಪೂರ್ಣ ಕಾಳಾಚಾರ್‌ ಜಯಮಾಲೆ ಧರಿಸಿದರು.

ಕಾರವಾರದಲ್ಲಿ 16 ಸ್ಥಾನ ಪಡೆದ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಅಂಕೋಲದಲ್ಲಿ 7 ಸ್ಥಾನ ಕಾಂಗ್ರೆಸ್‌ ಮಡಿಲಿಗೆ ಸೇರಿದೆ. ಬಿ.ಜೆ.ಪಿ. 5ರಲ್ಲಿ ಜಯ ಸಾಧಿಸಿದೆ. ಹಾವೇರಿಯ 27 ಸ್ಥಾನಗಳ ಪೈಕಿ 13ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಸವಣೂರಿನ 23 ಸ್ಥಾನಗಳ ಪೈಕಿ 16 ಕಾಂಗ್ರೆಸ್‌ ವಶವಾಗಿದೆ. ಕೋಲಾರದಲ್ಲಿ 31 ಸ್ಥಾನಗಳ ಪೈಕಿ 16 ಸ್ಥಾನ ಪಡೆದ ಸಂಯುಕ್ತ ಜನತಾದಳ ಜಯಭೇರಿ ಹೊಡೆದಿದೆ. ಶಿಡ್ಲಘಟ್ಟದ 23ಸ್ಥಾನಗಳ ಪೈಕಿ 13 ಕಾಂಗ್ರೆಸ್‌ ಪಾಲಾಗಿದೆ.

ಮಾಗಡಿಯ 23 ಸ್ಥಾನಗಳ ಪೈಕಿ 15 ಕಾಂಗ್ರೆಸ್‌ ವಶವಾಗಿದೆ. ರಾಮನಗರ ಪುರಸಭೆಯಲ್ಲಿ ಸಮಾಜವಾದಿ ಜನತಾದಳ ಮುನ್ನಡೆ ಸಾಧಿಸಿದೆ. ಹುಮನಾಬಾದ್‌ನಲ್ಲಿ ಕಾಂಗ್ರೆಸ್‌ 14 ಸ್ಥಾನ ಪಡೆದಿದೆ. ಬಸವಕಲ್ಯಾಣದಲ್ಲೂ ಕಾಂಗ್ರೆಸ್‌ ನಿಚ್ಚಳ ಬಹುಮತ ಪಡೆದಿದೆ. ಬಾಲ್ಕಿ ಪುರಸಭೆಯಲ್ಲಿ ಬಿ.ಜೆ.ಪಿ. ಹಾಗೂ ಕಾಂಗ್ರೆಸ್‌ ತಲಾ 11 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಒಂದು ಪಕ್ಷೇತರರ ಪಾಲಾಗಿದೆ.

ಗುಲ್ಬರ್ಗಾ ಜಿಲ್ಲೆಯ ಯಾದಗೀರ್‌ನಲ್ಲಿ ಕಾಂಗ್ರೆಸ್‌ 16 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದೆ. ಕುಮಟಾದಲ್ಲಿ 17 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದೆ. ಬಿ.ಜೆ.ಪಿ. ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿದೆ. ಬೇಲೂರಿನಲ್ಲಿ ಜೆಡಿಎಸ್‌ 10 ಸ್ಥಾನಗಳಿಸಿ ಮುನ್ನಡೆದಿದೆ. ಹಾನಗಲ್‌ಗಲ್ಲಿ ಕಾಂಗ್ರೆಸ್‌ 16 ಸ್ಥಾನ ತನ್ನದಾಗಿಸಿಕೊಂಡಿದೆ. ಒಟ್ಟಾರೆಯಾಗಿ ಕಾಂಗ್ರೆಸ್‌ ಬಹುತೇಕ ಎಲ್ಲೆಡೆ ವಿಜಯದ ಹಾದಿಯಲ್ಲಿ ಮುನ್ನಡೆದಿದೆ.

ಈ ಮಧ್ಯೆ ಮರು ಮತದಾನಕ್ಕೆ ಆದೇಶಿಸಿರುವ ಕಡೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ಮತದಾನ ಮುಂದುವರಿದಿದೆ. ಯಾವುದೇ ಅಹಿತಕರ ಘಟನೆ ನಡೆದ ವರದಿಗಳು ಬಂದಿಲ್ಲ. ಮತಎಣಿಕೆ ಕೇಂದ್ರಗಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X