ಅಂತರಂಗ ಬಹಿರಂಗಕ್ಕೆ ಬೇಕು ಕಡಿವಾಣ - ಡಿ. ವೀರೇಂದ್ರ ಹೆಗ್ಗಡೆ
ಉಜಿರೆ : ಸತ್ಯ, ಸದಾಚಾರಗಳ ದಾರಿಯಲ್ಲಿ ಸ್ಪಷ್ಟವಾದ ಗುರಿಯನ್ನಿಟ್ಟುಕೊಂಡು ಸಾಗುವ ಮನುಷ್ಯನಿಗೆ ದೈವ ಸಹಾಯ ತಾನೇ ತಾನಾಗಿ ಒದಗಿ ಬರುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಇತ್ತೀಚೆಗೆ ನಡೆದ, ಬೆಳ್ತಂಗಡಿ ತಾಲ್ಲೂಕಿನ ರೆಖ್ಯಾ ಗ್ರಾಮದ ಅರಣ್ಯದಲ್ಲಿ ನೂರಾರು ವರ್ಷಗಳಿಂದ ಅಜ್ಞಾತವಾಗಿದ್ದ ಶ್ರೀ ಗುಡ್ರಾ ಮಲ್ಲೇಶ್ವರ ದೇವಸ್ಥಾನದ ನೂತನ ನಿರ್ಮಾಣ, ಪ್ರತಿಷ್ಠಾಬಂಧ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಎಲ್ಲ ಧರ್ಮಗಳು ಮನುಷ್ಯನ ಅಂತರಂಗ ಹಾಗೂ ಬಹಿರಂಗಕ್ಕೆ ಕಡಿವಾಣ ಹಾಕುವ ಕಾರ್ಯವನ್ನು ಮಾಡುತ್ತಿವೆ ಎಂದು ಹೆಗ್ಗಡೆ ಅಭಿಪ್ರಾಯಪಟ್ಟರು.
ದೇವಸ್ಥಾನಗಳನ್ನು ಕಟ್ಟಿದರೆ ಸಾಲದು, ನಿತ್ಯವೂ ಅಲ್ಲಿಗೆ ಹೋಗಿ ಪ್ರೇರಣೆಯನ್ನು ಪಡೆಯುವಂತಾದರೆ ಮಾತ್ರ ದೇಗುಲದ ನಿರ್ಮಾಣ ಸಾರ್ಥಕವೆನಿಸುತ್ತದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು. ಜನಪ್ರಿಯ ಜ್ಯೋತಿಷಿ ಶಿಶಿಲದ ಕ.ಪು. ಸೀತಾರಾಮ ಕೆದಿಲಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)