ಮೂಡಿಗೆರೆ : ವಿದ್ಯುದಾಲಿಂಗನಕೆ ಒಂದೇಕುಟುಂಬದ ನಾಲ್ವರ ಬಲಿ
ಮೂಡಿಗೆರೆ : ಹಬ್ಬ ಮಾಡಬೇಕಿದ್ದ ಗೌಡಹಳ್ಳಿ ಬುಧವಾರ ಹಾಡಿದ್ದು ಚರಮಗೀತೆ. ಮೊಗೆಹಬ್ಬದ ಸಂಭ್ರಮದ ಆಚರಣೆಗೆ ಮಂಗಳವಾರ ಬಿದಿರು ಕಳಲೆ ತರಲು ಹೋದ ನಾಲ್ವರು ಹೆಣವಾಗಿದ್ದರು.
ಸಿದ್ದಮ್ಮ (70), ರತ್ನಮ್ಮ (35), ಅವಿನಾಶ್(8) ಹಾಗೂ ಅಶ್ವತ್ಥ್ (6) ಇವರೇ ವಿದ್ಯುತ್ ಶಾಕ್ಗೆ ಬಲಿಯಾದ ನತದೃಷ್ಟರು. ಕಳಲೆ ತರಲು ಗೌಡಹಳ್ಳಿಯ ಅರಣ್ಯ ಪ್ರದೇಶಕ್ಕೆ ಹೊರಟ ಈ ನಾಲ್ವರ ಪೈಕಿ ರತ್ನಮ್ಮ ರಸ್ತೆಯಲ್ಲಿ ಇಳಿಬಿದ್ದಿದ್ದ ತಂತಿ ದಾಟುವಾಗ ಎಡವಿದರು. ತಂತಿಯಾಟ್ಟಿಗೆ ವಿದ್ಯುತ್ ಸ್ಪರ್ಶ ಬಲವಾಗಿ ಬಡಿಯಿತು. ಒದ್ದಾಡುತ್ತಿದ್ದ ಇವರನ್ನು ಬಿಡಿಸಲು ಸಿದ್ದಮ್ಮ ಹಾಗೂ ಮಕ್ಕಳು ಯತ್ನಿಸಿದಾಗ ಒಬ್ಬರಿಂದೊಬ್ಬರಿಗೆ ವಿದ್ಯುತ್ ಹರಿದು ಎಲ್ಲಾ ಸಾವಪ್ಪಿದರು.
ಮಂಗಳವಾರ ಬೆಳಗ್ಗೆ ಹೊರಟ ಮಂದಿ ಸಂಜೆಯಾದರೂ ಬರದಿದ್ದ ಕಾರಣ ಗ್ರಾಮದವರು ಹುಡುಕಿದಾಗ, ರಾತ್ರಿ 8 ಗಂಟೆ ಹೊತ್ತಿಗೆ ವಿದ್ಯುತ್ ತಂತಿ ಬಳಿ ನಾಲ್ವರೂ ಹೆಣವಾಗಿದ್ದರು. ಶವ ಪರೀಕ್ಷೆಯ ನಂತರ ಬುಧವಾರ ಇವರ ಅಂತ್ಯ ಸಂಸ್ಕಾರ ಮಾಡಲಾಯಿತು.
ತಾಲೂಕಿನ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆ ಮೇಲೆ ಬಿದ್ದಿರುವುದು ಇಲ್ಲಿ ಸರ್ವೇ ಸಾಮಾನ್ಯ. ಇಲಾಖೆಗೆ ದೂರಿತ್ತರೂ, ಅಧಿಕಾರಿಗಳು ಲಕ್ಷ್ಯ ಕೊಡದಿರುವುದೇ ಈ ದುರಂತಕ್ಕೆ ಕಾರಣ ಎನ್ನುತ್ತಿದ್ದಾರೆ ಗ್ರಾಮಸ್ಥರು.
(ಇನ್ಫೋ ವಾರ್ತೆ)