‘ಮಹಾರಾಷ್ಟ್ರ ಭೂಷಣ ತೆಂಡೂಲ್ಕರ್ಭಾರತ ರತ್ನದತ್ತ.... ’
ಮುಂಬಯಿ : ಜಾಗತಿಕ ಮಟ್ಟದಲ್ಲಿ ಎತ್ತರದ ಸಾಧನೆ ಮಾಡಿರುವ ಭಾರತೀಯ ಕ್ರಿಕೆಟ್ನ ಧ್ರುವತಾರೆ ಸಚಿನ್ ತೆಂಡೂಲ್ಕರ್ಗೆ ಇನ್ನು ಭಾರತ ರತ್ನ ದೊರಕುವುದಷ್ಟೆ ಬಾಕಿ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಛಗನ್ ಭುಜ್ಪಾಲ್ ಅಭಿಪ್ರಾಯ ಪಟ್ಟಿದ್ದಾರೆ.
ಸಚಿನ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್ ಬುಧವಾರ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ಪ್ರದಾನ ಮಾಡಿದಾಗ ರಂಗ್ ಭವನ ರಂಗೇರಿತು. ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್, ಬಿಸಿಸಿಐನ ಮಾಜಿ ಅಧ್ಯಕ್ಷ ರಾಜ್ಸಿಂಗ್ ಡುಂಗಾರ್ಪುರ್, ಸಚಿನ್ ಚಿಕ್ಕವರಾಗಿದ್ದಾಗ ಕ್ರಿಕೆಟ್ ಕಲಿಸಿದ ತರಪೇತುದಾರ ರಮಾಕಾಂತ್ ಅರ್ಚೇಕರ್ ಮೊದಲಾದವರು ಸಚಿನ್ ಪ್ರಶಸ್ತಿ ಪಡೆಯುವಾಗ ಹಾಜರಿದ್ದರು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗ ಮಹಾರಾಷ್ಟ್ರ ಭೂಷಣ ಪುರಸ್ಕಾರಕ್ಕೆ ಭಾಜನರಾಗಿರುವ ಅತಿ ಕಿರಿಯ ಎನಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನದ ಮಹಾ ಮಿದುಳು ಡಾ.ವಿಜಯ್ ಭಕ್ತರ್ ಅವರಿಗೂ ಮಹಾರಾಷ್ಟ್ರ ಭೂಷಣ ಪುರಸ್ಕಾರ ಪ್ರದಾನ ಮಾಡಲಾಯಿತು. ಸಚಿನ್ 2000- 2001ನೇ ಸಾಲಿನ ಪ್ರಶಸ್ತಿಗೆ ಪಾತ್ರರಾದರೆ, ಭಕ್ತರ್ 1999- 2000ನೇ ಸಾಲಿನ ಪ್ರಶಸ್ತಿಗೆ ಭಾಜನರಾದರು. ಭಾರತದ ‘ಪರಮ್’ ಎಂಬ ಸೂಪರ್ ಕಂಪ್ಯೂಟರ್ ತಯಾರಿಕೆಯಲ್ಲಿ ಭಕ್ತರ್ ಪಾತ್ರ ಹಿರಿದು. ಇನ್ನು, ಸಚಿನ್ ಸಾಧನೆಯನ್ನು ಜಗತ್ತೇ ಹೇಳುತ್ತಿದೆ.
ಪ್ರಶಸ್ತಿ ಪ್ರಶಂಸನಾ ಪತ್ರ, ಸ್ಮರಣಾ ಮೂರ್ತಿ ಹಾಗೂ 5 ಲಕ್ಷ ರುಪಾಯಿ ನಗದನ್ನು ಒಳಗೊಂಡಿದೆ. ಸುನಿಲ್ ಗವಾಸ್ಕರ್, ಲತಾ ಮಂಗೇಶ್ಕರ್, ಸಾಹಿತಿ ಪಿ.ಎಲ್.ದೇಶಪಾಂಡೆ ಅವರು ಈ ಹಿಂದೆ ಇದೇ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಿವಿಗಡಚುವ ಚಪ್ಪಾಳೆ ಗಿಟ್ಟಿಸಿದ ಚೋಟೂ ಸಚಿನ್ ಸಹಜವಾಗಿಯೇ ಸಮಾರಂಭದ ಕೇಂದ್ರವಾಗಿದ್ದರು. ಪ್ರಶಸ್ತಿ ಸ್ವೀಕರಿಸಿ ಅವರಾಡಿದ ಮಾತುಗಳು- ನನಗೆ ಕೊಟ್ಟಿರುವ ಗೌರವಕ್ಕೆ ನಾನು ಆಭಾರಿ. ಇವತ್ತು ನಾನು ಇಲ್ಲಿ ನಿಲ್ಲಬೇಕಾದರೆ ಅಪ್ಪ ತೋರಿದ ಹಾದಿಯೇ ಕಾರಣ. ಅವರೀಗ ಬದುಕಿದ್ದರೆ ಚೆನ್ನಿತ್ತು. ನನ್ನ ಮೇಲೆ ಜನ ಇಟ್ಟಿರುವ ಭರವಸೆ ಹುಸಿಯಾಗದಂತೆ ಕಾಪಿಡುತ್ತೇನೆ. ಜಿಂಬಾಬ್ವೆ ಪ್ರವಾಸದಲ್ಲೂ ಉತ್ತಮವಾಗಿ ಆಡುವುದೇ ನನ್ನ ಗುರಿ.
(ಇನ್ಫೋ ವಾರ್ತೆ)