ಗುರುವಾರ ಬೆಂಗಳೂರಲ್ಲಿ ಚಂದ್ರಬಾಬು ನಾಯ್ಡು ಪ್ರತಿಕೃತಿ ದಹನ
ಬೆಂಗಳೂರು : ಕರ್ನಾಟಕದ ನೀರಿಗೆ ಅಕ್ರಮವಾಗಿ ಕನ್ನ ಹಾಕುತ್ತಿರುವ ಆಂಧ್ರಪ್ರದೇಶದ ಧೋರಣೆಯನ್ನು ಖಂಡಿಸಿ, ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಗುರುವಾರ ಬೆಂಗಳೂರಿನಲ್ಲಿ ಚಂದ್ರಬಾಬು ನಾಯ್ಡು ಅವರ ಭೂತದಹನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಗುರುವಾರ ಬೆಳಗ್ಗೆ 11ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ. ನಾರಾಯಣ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿರಾ ತಾಲೂಕಿನ ಹೊನ್ನಗೊಂಡನಹಳ್ಳಿ ಬಳಿಯ ಸಿಡಗಪ್ಪಕಟ್ಟೆಯಿಂದ ಮಡಕಶಿರಾ ತಾಲೂಕಿನ ಟಿ. ಬ್ಯಾಡರಹಳ್ಳಿ ಕೆರೆಗೆ ನೀರು ಹರಿಸಲು ಆಂಧ್ರ ಪ್ರದೇಶ ಸರಕಾರ ಕಾನೂನು ಬಾಹಿರವಾಗಿ ಫೀಡರ್ ಕಾಲುವೆ ನಿರ್ಮಿಸುತ್ತಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಇದು ಚಂದ್ರಬಾಬು ನಾಯ್ಡು ಅವರ ದುರಹಂಕಾರದ ವರ್ತನೆಯಾಗಿದೆ. ಇಂತಹ ದುಸ್ಸಾಹಸಗಳಿಂದ ಎರಡೂ ರಾಜ್ಯಗಳ ಬಾಂಧವ್ಯ ಸಂಪೂರ್ಣ ಹದಗೆಡುತ್ತದೆ. ಕೂಡಲೇ ಕಾಮಗಾರಿಗಳನ್ನು ನಿಲ್ಲಿಸುವ ಮೂಲಕ ರಾಷ್ಟ್ರದ ಏಕತೆ ಕಾಪಾಡುವಂತೆ ಅವರು ಚಂದ್ರಬಾಬು ನಾಯ್ಡು ಅವರನ್ನು ಒತ್ತಾಯಿಸಿದ್ದಾರೆ.
ಆಂಧ್ರಪ್ರದೇಶ ಸರಕಾರ ಫೀಡರ್ ಕಾಲುವೆ ಕಾಮಗಾರಿ ನಿಲ್ಲಿಸದಿದ್ದಲ್ಲಿ, ಚಳವಳಿ ಕೇಂದ್ರ ಸಮಿತಿಯ ಕಾರ್ಯಕರ್ತರು ಹಾಗೂ ಕನ್ನಡ ಚಳವಳಿಗಾರರು ಕಾಮಗಾರಿ ಸ್ಥಳಕ್ಕೇ ಹೋಗಿ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...