ಚಿತ್ರದುರ್ಗ : ಕಾಂಗ್ರೆಸ್ಸಿಗರ ಕಚ್ಚಾಟಕ್ಕೆಕಾರ್ಯಕರ್ತನೊಬ್ಬನ ಬಲಿ
ಚಿತ್ರದುರ್ಗ : ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಇಬ್ಬಣಗಳ ನಡುವೆ ಹೊತ್ತಿ ಉರಿಯುತ್ತಿದ್ದ ಜಟಾಪಟಿಗೆ, ಮಂಗಳವಾರ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ.
ಆಲಿಮುಲ್ಲಾ ಬಡಾವಣೆಯಲ್ಲಿ ಚುನಾವಣಾ ನಿರತರಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದವನೇ ಆದ ಅಬ್ದುಲ್ ಸಾಬ್ ಎನ್ನುವ ವ್ಯಕ್ತಿಯ ಮನೆಗೆ ಮಂಗಳವಾರ ರಾತ್ರಿ 9.30 ರ ಸುಮಾರಿಗೆ ನುಗ್ಗಿ , ಆತನನ್ನು ಮನೆಯಿಂದ ಹೊರಗೆ ಎಳೆತಂದು ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನಾದ ಅಬ್ದುಲ್ ಸಾಬ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪ ಸಂಖ್ಯಾತ ಸಮುದಾಯದ ಪ್ರಧಾನ ಕಾರ್ಯದರ್ಶಿ ನೂರುಲ್ಲಾ ಶರೀಫ್ರ ಸಂಬಂಧಿಯಾಗಿದ್ದಾನೆ.
ಕೊಲೆ ಘಟನೆಯ ಸಂಬಂಧ ಆಲಿಮುಲ್ಲಾ ಬಡಾವಣೆಯ 9 ನೇ ವಾರ್ಡಿನ ಅಭ್ಯರ್ಥಿ ಮೆಹಬೂಬ್ ಖಾತೂನ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಆರ್.ಕೆ. ಸರದಾರ್ ಹಾಗೂ ಮುನ್ನಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಡಾವಣೆಯಲ್ಲಿ ಭಾವುಕ ಸ್ಥಿತಿ ಮೂಡಿರುವುದರಿಂದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ರವಾನಿಸಲಾಗಿದೆ.
(ಇನ್ಫೋ ವಾರ್ತೆ)