ಮಳೆಗಾಗಿ ಮುಗಿಲು ನೋಡುತ್ತಿವೆ ಕಣ್ಣುಗಳು
ಬೆಂಗಳೂರು : ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಬಿಸಿಲು ಏರಿದೆ. ರಾಯಚೂರಿನಲ್ಲಿ ಅತಿಹೆಚ್ಚು ತಾಪಮಾನ 43.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬೆಂಗಳೂರಿನಲ್ಲಿ ಕೂಡ ಹಗಲಿನ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು.
ಈ ಮಧ್ಯೆ ಒಳನಾಡಿನ ಅಲ್ಲಲ್ಲಿ ಸಣ್ಣ ಮಳೆ ಬಿದ್ದಿದೆ. ಗರಿಷ್ಠ ತಾಪಮಾನವೂ ಏರಿದೆ. ಕರಾವಳಿಯಲ್ಲಿ ಹೆಚ್ಚಾಗಿ ಒಣಹವೆಯೇ ಮುಂದುವರಿದಿತ್ತು. ಉತ್ತರ ಒಳನಾಡಿನ ಅನೇಕ ಕಡೆಗಳಲ್ಲೂ ಉಷ್ಣಾಂಶ ಸಾಮಾನ್ಯಕ್ಕಿಂತಲೂ ಅಧಿಕವಾಗಿತ್ತು. ದಕ್ಷಿಣ ಒಳನಾಡಿನ ಕೆಲವೆಡೆ ಸಾಮಾನ್ಯ ಮಟ್ಟದಲ್ಲಿತ್ತು.
ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಮುಖ್ಯವಾಗಿ ಒಣಹವೆ ಇರಲಿದೆ. ಒಳನಾಡಿನ ಅಲ್ಲಲ್ಲಿ ಚದುರಿದಂತೆ ಮಳೆ ಅಥವಾ ಗುಡುಗಿನಿಂದ ಕೂಡಿದ ಸುರಿಮಳೆ ಆಗಲಿದೆ. ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ಮಲ ಆಕಾಶ ಇದ್ದು, ಗರಿಷ್ಠ ಉಷ್ಣಾಂಶ 34 ಡಿಗ್ರಿ ತಲುಪಲಿದೆ.
ಏರುತ್ತಿರುವ ಬಿರುಬಿಸಿಲಿನಿಂದ ಬೆವರು ಹರಿಯುತ್ತಿದೆ. ಬಿಸಿಲ ಝಳಕ್ಕೆ ಆಯಾಸ ಹೆಚ್ಚುತ್ತಿದೆ. ಮಧ್ಯಾಹ್ನದ ನಂತರವಂತೂ ಹೇಳಿಕೊಳ್ಳಲಾರದ ತಳಮಳ. ಎಷ್ಟು ನೀರು ಕುಡಿದರೂ ಇಂಗದ ದಾಹ. ರಾತ್ರಿಯಂತೂ ಗಿರಿಗಿರಿ ತಿರುಗುವ ಫ್ಯಾನ್ನಿಂದ ಮತ್ತಷ್ಟು ಬಿಸಿಗಾಳಿಯೇ ಹೊರಹೊಮ್ಮುತ್ತಿದೆ. ಮಳೆಯಾದರೆ ಸಾಕೆಂಬ ಜನರ ಕಣ್ಣುಗಳು ಮುಗಿಲು ನೋಡುತ್ತಿವೆ. ಇಳೆಯೂ ಮಳೆಯನ್ನೇ ನಿರೀಕ್ಷಿಸುತ್ತಿದೆ.