ವಿಶ್ವ ಹಿಂದೂ ಪರಿಷತ್ನ ಅಶೋಕ್ ಸಿಂಘಾಲ್ಗೆ ಹೃದಯಾಘಾತ
ಕೊಯಮತ್ತೂರು : ವಿಶ್ವ ಹಿಂದೂ ಪರಿಷತ್ನ ಮುಖ್ಯಸ್ಥ ಅಶೋಕ್ ಸಿಂಘಾಲ್ ಮಂಗಳವಾರ ತೀವ್ರ ಹೃದಯಾಘಾತಕ್ಕೆ ತುತ್ತಾಗಿದ್ದು , ಅವರನ್ನು ಇಲ್ಲಿನ ಕೆಜಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸಿಂಘಾಲ್ ಅವರ ದೇಹಸ್ಥಿತಿ ಈಗ ಸ್ಥಿರವಾಗಿದ್ದು , ತೀವ್ರ ನಿಗಾ ವಿಭಾಗದಲ್ಲಿ ನುರಿತ ಹೃದಯ ತಜ್ಞರು ಅವರನ್ನು ಉಪಚರಿಸುತ್ತಿದ್ದಾರೆ. ಮುಂದಿನ 48 ಗಂಟೆಗಳವರೆಗೆ ಅವರನ್ನು ಅಬ್ಸರ್ವೇಶನ್ನಲ್ಲಿ ಇಡಲಾಗುವುದು ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಜಿ. ಭಕ್ತವತ್ಸಲಂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಿಂಘಾಲ್ ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ಇದೇ ಮೊದಲೇನಲ್ಲ . 1992 ರಲ್ಲಿ ಹಾಲೆಂಡ್ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ಕೂಡ ಅವರು ಹೃದಯಾಘಾತಕ್ಕೆ ತುತ್ತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೋಮವಾರವಷ್ಟೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಂಘಾಲ್ ಮಾರ್ಚ್ 16, 2002 ಅವಧಿಯಾಳಗೆ ರಾಮ ಮಂದಿರವನ್ನು ನಿರ್ಮಿಸುವ ತನ್ನ ನಿಲುವಿಗೆ ವಿಶ್ವ ಹಿಂದೂ ಪರಿಷತ್ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಒಮ್ಮೆ ಮಂದಿರದ ಕೆಲಸ ಪ್ರಾರಂಭವಾದರೆ, ಆನಂತರ ಪ್ರತಿಭಟನೆ ಎದುರಾಗಬಹುದೆಂದು ತಾವು ಭಾವಿಸುವುದಿಲ್ಲ ಎಂದು ಹೇಳಿದ್ದ ಅವರು, ಬರುವ ವರ್ಷದ ಫೆಬ್ರವರಿ 17ರಂದು ಅಯೋಧ್ಯೆಯಿಂದ ದೆಹಲಿಗೆ ತೆರಳುವ 5 ಸಾವಿರ ಸಾಧುಗಳ ರ್ಯಾಲಿ ಮಂದಿರ ನಿರ್ಮಾಣ ಕುರಿತು ಘೋಷಣೆ ಹೊರಡಿಸುವರು ಎಂದು ಹೇಳಿದ್ದರು.
(ಇನ್ಫೋ ವಾರ್ತೆ)