ನಾನು ಎಲ್ಲ 234 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇನೆ - ಜಯಲಲಿತಾ
ಚೆನ್ನೈ : ಅಣ್ಣಾ ಡಿಎಂಕೆ ಪಕ್ಷದಿಂದ ಮತ್ತೊಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ತಮಿಳುನಾಡಿನ ಜನ ಒಪ್ಪಿಕೊಳ್ಳದ ಕಾರಣ, ವಿಧಾನಸಭೆ ಚುನಾವಣೆಗಳಲ್ಲಿ ತಮ್ಮ ನಾಮಪತ್ರ ತಿರಸ್ಕೃತವಾಗಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ತಾವು ಸ್ಪರ್ಧಿಯಾಗಿರುವುದಾಗಿ ಕುಮಾರಿ ಜಯಲಲಿತಾ ಘೋಷಿಸಿದ್ದಾರೆ.
ಕೃಷ್ಣಗಿರಿ, ಆಂಡಿಪಟ್ಟಿ , ಭುವನಗಿರಿ ಹಾಗೂ ಪುದುಕೋಟೈ ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತವಾಗಿರುವುದು ತಮಗೆ ನಿರಾಶೆ ಉಂಟು ಮಾಡಿಲ್ಲ ಎಂದು ಜಯಲಲಿತಾ ಸ್ಪಷ್ಟ ಪಡಿಸಿದ್ದಾರೆ. ಸ್ಟಾರ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಜಯಲಲಿತಾ ಈ ವಿಷಯ ತಿಳಿಸಿದ್ದಾರೆ.
ಈ ಮುನ್ನ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ಉದ್ದೇಶಿಸಿದ್ದೆ . ಆದರೆ, ಚುನಾವಣಾ ಆಯೋಗದ ತೀರ್ಮಾನದಿಂದಾಗಿ ಎಲ್ಲಾ 234 ಕ್ಷೇತ್ರಗಳಲ್ಲಿ ತಾವು ಸ್ಪರ್ಧಿಸುವಂತಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಜನರಾಗಲಿ, ಪಕ್ಷದ ನಾಯಕರು- ಕಾರ್ಯಕರ್ತರಾಗಲಿ ತಮ್ಮ ಹೊರತು ಇತರ ನಾಯಕರನ್ನು ಮುಖ್ಯಮಂತ್ರಿ ಪದಕ್ಕೆ ಒಪ್ಪುವುದಿಲ್ಲ ಎಂದು ಜಯಲಲಿತಾ ಖಡಾ ಖಂಡಿತ ಹೇಳಿದ್ದಾರೆ. ತಾನ್ಸಿ ಭೂಹಗರಣದ ಹಿನ್ನೆಲೆಯಲ್ಲಿ ಅವರ ನಾಮಪತ್ರಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಿರಸ್ಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...