ಮೂರು ದಶಕದ ನಂತರ ಮಂಗಳೂರಿನಲ್ಲಿ ಕುಸ್ತಿ ಸ್ಪರ್ಧೆ
ಮಂಗಳೂರು : ಮೂವತ್ತು ವರ್ಷಗಳ ಬಳಿಕ ಆಯೋಜಿಸಲಾಗಿರುವ ಜನಪ್ರಿಯ ಅಖಾಡ ಕುಸ್ತಿ ಸ್ಪರ್ಧೆ ಮಂಗಳೂರಿನ ನೆಹರು ಮೈದಾನದಲ್ಲಿ ಭಾನುವಾರ ಆರಂಭವಾಗಿದೆ. ಅಪರೂಪಕ್ಕೆ ನಡೆಯುತ್ತಿರುವ ಈ ಸ್ಪರ್ಧೆಗೆ ಮಂಗಳೂರಿನಲ್ಲಿ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಖಾಡ ಕುಸ್ತಿ ಸ್ಪರ್ಧೆಯನ್ನು ಪಿ.ಪಿ. ಹೆಗಡೆ ಮಿತ್ರ ಬಳಗ ಸಂಘಟಿಸಿದೆ. ಸುಮಾರು ನೂರಕ್ಕೂ ಹೆಚ್ಚು ಸ್ಪರ್ಧಿಗಳು ಅಖಾಡ ಕುಸ್ತಿಯಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ಸ್ಪರ್ಧೆ ವಿಧ್ಯುಕ್ತವಾಗಿ ಆರಂಭವಾದಾಗ ಅಸಂಖ್ಯ ಪ್ರೇಕ್ಷಕರು ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಿದರು. ಕಾರ್ಮಿಕೋತ್ಸವ- 2001 ಕಾರ್ಯಕ್ರಮದ ಒಂದಂಗವಾಗಿ ಅಖಾಡ ಕುಸ್ತಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಮೂರು ದಿನಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಂಗಳವಾರ, ತುಳುನಾಡ ಕೇಸರಿ ಬಿರುದು ನೀಡಿ ಸನ್ಮಾನಿಸಲಾಗುವುದು. ಅಂದು ನಡೆಯುವ ಕಾರ್ಮಿಕೋತ್ಸವದಲ್ಲಿ ಮಾಜಿ ಸಚಿವ ಬ್ಲೇಸಿಯಸ್ ಡಿಸೋಜ, ಶಾಸಕ ಯೋಗಿಶ್ ಭಟ್, ಡಿ.ವಿ. ಸದಾನಂದ ಗೌಡ, ಎಂ.ಕೆ. ಇಬ್ರಾಹಿಂ ಅವರು ಭಾಗವಹಿಸುವರು.
(ಇನ್ಫೋ ವಾರ್ತೆ)