ಬೀದರ್ ಕರ್ನಾಟಕದಲ್ಲಿದೆಯೇ ಎಂದು ಕೃಷ್ಣರನ್ನೇ ಕೇಳಬೇಕು?
ಹುಮನಾಬಾದ್ : ಬೀದರ್ ಕರ್ನಾಟಕದಲ್ಲಿದೆಯೇ ಎಂಬ ಪ್ರಶ್ನೆಯನ್ನು ಮುಖ್ಯಮಂತ್ರಿ ಕೃಷ್ಣರನ್ನು ಕೇಳುವ ಕಾಲ ಬಂದಿದೆ. ಇದು ದುರ್ದೈವ ಎಂದು ಕೇಂದ್ರ ಪ್ರವಾಸೋದ್ಯಮ ಹಾಗೂ ಕನ್ನಡ ಸಂಸ್ಕೃತಿ ಸಚಿವ ಅನಂತಕುಮಾರ್ ಹೇಳಿದ್ದಾರೆ.
ಇಲ್ಲಿ ನಡೆದ ಬಿ.ಜೆ.ಪಿ. ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕರ್ನಾಟಕದ ಭೂಪಟದಲ್ಲಿ ಕಳಶಪ್ರಾಯದಂತಿರುವ ಬೀದರ್ ಇನ್ನೂ ರಾಜ್ಯದಲ್ಲಿದೆಯೇ? ಎಂಬ ಅನುಮಾನ ಮೂಡಿದೆ. ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳಿಗೆ ಬೀದರ್ ಎಂಬ ಪ್ರದೇಶವೊಂದು ಇದೆ ಎಂಬುದು ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಗೊತ್ತಿದ್ದರೆ ಅವರು ಒಮ್ಮೆಯಾದರೂ ಬೀದರ್ಗೆ ಭೇಟಿ ಕೊಟ್ಟಿಲ್ಲ ವೇಕೆ? ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರೇ ಉತ್ತರ ನೀಡಬೇಕು ಎಂದು ವ್ಯಂಗ್ಯವಾಗಿ ನುಡಿದರು.
ಉತ್ತರ ಕರ್ನಾಟಕದ ಬಗ್ಗೆ ಮುಖ್ಯಮಂತ್ರಿಗಳಿಗಿರುವ ಧೋರಣೆಯನ್ನು ಇದು ತೋರಿಸುತ್ತದೆ. ಒಂದು ವರ್ಷ ಎಂಟು ತಿಂಗಳ ಅವಧಿಯಲ್ಲಿ ಬೀದರ್ಗೆ ಬರುವಷ್ಟು ಕಾಲಾವಕಾಶ ಕೃಷ್ಣರಿಗೆ ದೊರೆಯಲಿಲ್ಲವೇ? ಇದು ಕೃಷ್ಣರ ನಿರ್ಲಕ್ಷ್ಯ ಹಾಗೂ ಅಸಮಾನತೆಗೆ ಹಿಡಿದ ಕನ್ನಡಿ ಆಗಿದೆ ಎಂದೂ ಆರೋಪಿಸಿದರು.