‘ಚಂದ್ರನಲ್ಲಿಗೆ ಉಪಗ್ರಹ .. ಕನಸು, ಕನಸು..ಕನಸಿನಿಂದ ನನಸು’
ಡೆಹ್ರಾಡೂನ್ : ಚಂದ್ರನ ಬಳಿಗೆ ಉಪಗ್ರಹ ಕಳಿಸಲು ದೇಶ ಯೋಜಿಸುತ್ತಿದೆಯೆಂದು ದೇಶದ ಮಿಸೈಲ್ ವ್ಯವಸ್ಥೆಯ ಜನಕ ಎಂದು ಹೆಸರಾದ ಹಾಗೂ ಸರ್ಕಾರದ ವೈಜ್ಞಾನಿಕ ಸಲಹೆಗಾರ ಡಾ.ಎ.ಪಿ.ಜೆ. ಅಬ್ದುಲ್ ಕಲಂ ಹೇಳಿದ್ದಾರೆ.
ಕನಸು, ಕನಸು, ಕನ ಸು.. ಕನಸುಗಳು ಯೋಚನೆಗಳಾಗುತ್ತವೆ, ಯೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಅಂತರಿಕ್ಷಕ್ಕೆ ನಾವು ಈಗಾಗಲೇ ಹಲವಾರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ್ದೇವೆ. ಚಂದ್ರನ ಬಳಿಗೆ ಉಪಗ್ರಹ ಕಳಿಸುವ ಯೋಚನೆಯೂ ಯಶಸ್ವಿಯಾಗುವ ಬಗೆಗೆ ತಮಗೆ ವಿಶ್ವಾಸವಿದೆ ಎಂದು ಕಲಂ ಹೇಳಿದರು. ತಮ್ಮ ಮಿಲೆನಿಯಂ ವಿಷನ್ : 2020 ಎನ್ನುವ ವಿಷಯದ ಬಗ್ಗೆ ಭಾನುವಾರ ವಿವರಣೆ ನೀಡುತ್ತಿದ್ದ ಅವರು ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ ಬದಲಾಗುವ ದಿನ ದೂರವಿಲ್ಲ ಎಂದರು.
ಇನ್ನೆರಡೇ ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸೇರ್ಪಡೆಗೊಳಿಸುವ ಉದ್ದೇಶದಿಂದ 500 ಕ್ಕೂ ಹೆಚ್ಚು ವಿಜ್ಞಾನಿಗಳು ತಮ್ಮ ಕಾರ್ಯನಿರತ ಯೋಜನೆಗಳಲ್ಲಿ ದುಡಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಡತನ ನಿರ್ಮೂಲನವಾಗುವುದು ಅಗತ್ಯ, 300 ಮಿಲಿಯನ್ ಭಾರತೀಯರು ಬಡತನ ರೇಖೆಗಿಂತ ಕೆಳಗಿದ್ದಾರೆ. ಈ ಸಂಖ್ಯೆಯನ್ನು ನಾವು ಇಳಿಮುಖಗೊಳಿಸಬೇಕಾಗಿದೆ. ದೇಶದ ಜಿಡಿಪಿ ದರ ಪ್ರತಿಶತ 6 ರಿಂದ ಶೇ.9-10 ಕ್ಕೆ ಮುಟ್ಟಿದೆ ಎಂದು ಕಲಂ ಹೇಳಿದರು.
ಆರೋಗ್ಯ, ಶಿಕ್ಷಣ, ಕೃಷಿ, ಆಹಾರ ಸಂಸ್ಕರಣೆ ವಿಭಾಗಗಳಲ್ಲಿ ದೇಶ ಸಾಧಿಸಬೇಕಾದದ್ದು ಬಹಳಷ್ಟಿದೆ. ಪ್ರತಿ ವರ್ಷ 200 ಮಿಲಿಯನ್ ಟನ್ ಆಹಾರ ಧಾನ್ಯವನ್ನು ದೇಶ ಉತ್ಪಾದಿಸುತ್ತಿದೆ. ಈ ಪ್ರಮಾಣವನ್ನು 300 ಟನ್ಗೆ ಏರಿಸುವ ಮೂಲಕ ದೇಶವನ್ನು ಸ್ವಾವಲಂಬಿಗೊಳಿಸಬೇಕಾಗಿದೆ ಎಂದು ಹೇಳಿದ ಅವರು, ಸಣ್ಣ ಕುಟುಂಬಗಳು ಭಾರತದ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯ ಪಟ್ಟರು.
(ಇನ್ಫೋ ವಾರ್ತೆ)