ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕ ಈಗಲೂ ನಂ.1 : ಎಸ್.ಎಂ. ಕೃಷ್ಣ
ಬೆಂಗಳೂರು : ವಾರದಲ್ಲಿ ಕನಿಷ್ಠ ಒಂದು ವಿದೇಶೀ ಬಂಡವಾಳ ಹೊಂದಿರುವ ಕಂಪನಿಗಳು ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಸ್ಥಾಪಿಸಲು ನೊಂದಣಿ ಮಾಡುತ್ತಿದ್ದು, ಐ.ಟಿ. ಕ್ಷೇತ್ರದಲ್ಲಿ ಈಗಲೂ ರಾಜ್ಯ ನಂ.1 ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಕರ್ನಾಟಕ ಒಂದು ಗೌರವಯುತ ರಾಜ್ಯ ಎಂದು ಬಹುರಾಷ್ಟ್ರೀಯ ಕಂಪನಿಗಳು ಗುರುತಿಸಿವೆ. ಹಲವು ರಾಷ್ಟ್ರಗಳು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ನೆರವು ನೀಡುವಂತೆ ರಾಜ್ಯವನ್ನು ಕೋರುತ್ತಿದ್ದಾರೆ. ಶ್ರೀಲಂಕಾದ ಉನ್ನತ ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರು ತಮ್ಮನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ದ್ವೀಪರಾಷ್ಟ್ರದಲ್ಲಿ ಐ.ಟಿ. ಅಭಿವೃದ್ಧಿಗೆ ನೆರವು ನೀಡುವಂತೆ ಕೋರಿದರು ಎಂದೂ ಕೃಷ್ಣ ಹೇಳಿದರು.
ನಗರದಲ್ಲಿ ಎಸ್.ಪಿ.ಐ.ಕೆ.ಇ. (ಸ್ಪೈಕ್) ಟೆಕ್ನಾಲಜೀಸ್ನ ನ್ಯೂ ಇಂಡಿಯಾ ಡಿಸೈನ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್ ಕ್ಷೇತ್ರದಲ್ಲೂ ಇಲ್ಲಿ ಉತ್ತಮ ಅವಕಾಶಗಳಿವೆ. ಈ ಕ್ಷೇತ್ರದಲ್ಲಿ 2000 ಸಾಲಿನಲ್ಲಿ ಮೂರು ದಶಲಕ್ಷ ಅಮೆರಿಕನ್ ಡಾಲರ್ ವಹಿವಾಟು ನಡೆದಿತ್ತು. ಇದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಹಲವು ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಶಾಖೆ ಆರಂಭಿಸುತ್ತಿವೆ. ವಿಶ್ವವಿಖ್ಯಾತ ಡಿಸೈನ್ ಸಂಸ್ಥೆಗಳು ಬೆಂಗಳೂರನ್ನೇ ಮುಖ್ಯಕೇಂದ್ರವನ್ನಾಗಿಸಿಕೊಳ್ಳುತ್ತಿವೆ. ಇದು ರಾಜ್ಯಕ್ಕೆ ಹೆಮ್ಮೆ ತರುವ ವಿಷಯ ಎಂದರು. ಈ ಸಂದರ್ಭದಲ್ಲಿ ಅವರು, ಚಿಪ್ ಡಿಸೈನ್ಗೆ ಸಂಬಂಧಿಸಿದ ಸಿಡಿ ರಾಮ್ ಬಿಡುಗಡೆ ಮಾಡಿದರು.