ವಿ.ವಿ. ಮಟ್ಟದಲ್ಲಿ ಜ್ಯೋತಿಷ್ಯಶಾಸ್ತ್ರ ಅಧ್ಯಯನಕೈಬಿಡಲು ಆಗ್ರಹ
ಬೆಂಗಳೂರು : ವಿಜಯವಾಡದ ನಾಸ್ತಿಕ ಕೇಂದ್ರದ ಸರಸ್ವತಿ ಗೋರಾ ಅವರಿಗೆ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ 2000 ಸಾಲಿನ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರು ಆಂಧ್ರಪ್ರದೇಶದ ಸರಸ್ವತಿ ಅವರಿಗೆ ಶಾಲು ಹೊದಿಸಿ, ಬಸವಣ್ಣನವರ ಕಂಚಿನ ವಿಗ್ರಹ, ಪ್ರಶಸ್ತಿ ಮೊತ್ತ ಹಾಗೂ ಪ್ರಶಸ್ತಿಪತ್ರ ನೀಡಿ ಪುರಸ್ಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸರಸ್ವತಿ ಗೋರಾ ಅವರು ತಮಗೆ ದೊರೆತ ಈ ಪುರಸ್ಕಾರದಿಂದ ಉತ್ಸಾಹ ಇಮ್ಮುಡಿಯಾಗಿದೆ. ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸಲು ಸ್ಫೂರ್ತಿ ದೊರೆತಿದೆ ಎಂದರು. ವಿಧವಾ ವಿವಾಹ, ಅಂತರ್ಜಾತೀಯ ವಿವಾಹ ಮಾಡುವ ಮೂಲಕ ಮೂಢನಂಬಿಕೆಗಳನ್ನು ನಾವು ಮೆಟ್ಟಿನಿಲ್ಲುತ್ತಿರುವ ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಜ್ಯೋತಿಷ್ಯಶಾಸ್ತ್ರ ಅಧ್ಯಯನ ಆರಂಭಿಸುವ ಕೇಂದ್ರ ಸರಕಾರದ ಉದ್ದೇಶ ಸಕಾಲಿಕವಲ್ಲ ಎಂದೂ ಗೋರಾ ಅಭಿಪ್ರಾಯಪಟ್ಟರು.
ಜ್ಯೋತಿಷ್ಯಶಾಸ್ತ್ರ ಅಧ್ಯಯನ ನಿರ್ಧಾರವನ್ನು ಕೈಬಿಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ ಅವರು, ಬಸವ ಪುರಸ್ಕಾರ ನೀಡಿದ ಕರ್ನಾಟಕ ಸರಕಾರವನ್ನು ಪ್ರಶಂಸಿಸಿದರು. ಬಸವ ತತ್ವಗಳ ಪ್ರಚಾರದಲ್ಲಿ ಮಹತ್ತರ ಪಾತ್ರವಹಿಸಿದ ಆಂಧ್ರಪ್ರದೇಶದ 80ರ ಹರೆಯದ ಸರಸ್ವತಿ ಗೋರಾ ಅವರನ್ನು ‘ಬಸವ ಪುರಸ್ಕಾರ’ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವೆ ರಾಣಿ ಸತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಸಿ. ರಾಮಮೂರ್ತಿ, ಇಲಾಖಾ ಕಾರ್ಯದರ್ಶಿ ಅ.ರಾ. ಚಂದ್ರಹಾಸಗುಪ್ತ ಮೊದಲಾದವರು ಭಾಗವಹಿಸಿದ್ದರು. ಮುಖ್ಯಮಂತ್ರಿ ಕೃಷ್ಣ ಗೈರುಹಾಜರಾಗಿದ್ದರು.
ಮುಖಪುಟ / ಇವತ್ತು... ಈ ಹೊತ್ತು...