ಕ್ಷೀಣಿಸಿದೆ ಮಳೆ, ಹೆಚ್ಚುತ್ತಿದೆ ಬಿರು ಬಿಸಿಲು
ಬೆಂಗಳೂರು : ರಾಜ್ಯದಲ್ಲಿ ಸುರಿದ ಅಕಾಲಿಕ ಭರ್ಜರಿ ಮಳೆ ಈಗ ತಣ್ಣಗಾಗಿದೆ. ಎಲ್ಲೋ ಒಂದೆರೆಡು ಕಡೆ ಸಣ್ಣ ಮಳೆ ಆದ ವರದಿ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಚದುರಿದಂತೆ ಮಳೆ ಆಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರಿದಿದೆ.
ಕಾರ್ಕಳದಲ್ಲಿ 1 ಸೆಂಟಿ ಮೀಟರ್ ಮಳೆ ಆಗಿದೆ. ರಾಜ್ಯದ ಗರಿಷ್ಠ ತಾಪಮಾನದಲ್ಲಿ ಅಲ್ಪ ಬದಲಾವಣೆ ಕಂಡುಬಂದಿದೆ. ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಆಗಿದ್ದರೆ, ಉತ್ತರ ಒಳನಾಡಿನಲ್ಲಿ ಸಾಮಾನ್ಯ ಮಟ್ಟದಲ್ಲಿತ್ತು. ಕರಾವಳಿಯಲ್ಲಿ ಸಾಮಾನ್ಯಕ್ಕಿಂತಲೂ ತುಸು ಹೆಚ್ಚಾಗಿತ್ತು.
ರಾಜ್ಯದ ಅತಿ ಹೆಚ್ಚು ತಾಪಮಾನ ರಾಯಚೂರಿನಲ್ಲಿ (41.5ಡಿಗ್ರಿ ಸೆಲ್ಸಿಯಸ್) ದಾಖಲಾಗಿತ್ತು. ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಮುಖ್ಯವಾಗಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇರುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 33 ಡಿಗ್ರಿ ತಲುಪುವ ಸೂಚನೆ ಇದೆ ಎಂದಿದೆ ಬೆಂಗಳೂರಿನಲ್ಲಿರುವ ಹವಾಮಾನ ವೀಕ್ಷಣಾಲಯದ ವರದಿ.