‘ದಳಗಳ ವಿಲೀನದ ಬಗ್ಗೆ ಮಾತಾಡುವಅಧಿಕಾರ ಹೆಗಡೆ ಅವರಿಗಿಲ್ಲ’
ಬೆಂಗಳೂರು : ಜೆ.ಎಚ್.ಪಟೇಲರು ಹೇಳಿದ್ದರು- ‘ಬಿಜೆಪಿ ಕ್ಯಾನ್ಸರ್, ಕಾಂಗ್ರೆಸ್ ಶಾಪ’ ಅಂತ. ಅದು ನಿಜ ಕೂಡ. ಬಹುಶಃ ಹೆಗಡೆ ಅವರಿಗೆ ಪಟೇಲರ ಕನಸ ನನಸು ಮಾಡೋ ಉದ್ದೇಶ ಇಲ್ಲ ಅಂತ ಕಾಣುತ್ತೆ. ಜಾತ್ಯತೀತ ಹಾಗೂ ಸಂಯುಕ್ತ ಜನತಾ ದಳದ ವಿಲೀನದ ಬಗ್ಗೆ ಮಾತಾಡುವ ಅಧಿಕಾರ ಹೆಗಡೆ ಅವರಿಗಿಲ್ಲ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಡಿದ ಮಾತುಗಳಿವು. ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರೂ ಆದ ದೇವೇಗೌಡ ತಮ್ಮ ಮಾತುಗಳಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬಗ್ಗೆ ಟೀಕೆಗಳ ಹರಿಸಿದರು. ಎರಡಾದ ದಳವನ್ನು ಒಂದು ಬಣವಾಗಿ ಮಾಡಲು ಮಾತುಕತೆಗೆ ಚಾಲನೆ ಕೊಟ್ಟಿದ್ದು ನಾನು, ಬೊಮ್ಮಾಯಿ ಹಾಗೂ ಪಟೇಲ್. ಆಗ ಹೆಗಡೆ ಎಲ್ಲಿದ್ದರು ಎಂದು ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಗೌಡ ಮರು ಪ್ರಶ್ನೆ ಎಸೆದರು.
ನನಗ್ಯಾರ ಹಂಗೂ ಇಲ್ಲ, ಅವರಲ್ಲೇ ಇರಲಿ : ಎರಡೂ ಬಣಗಳ ಒಂದು ಮಾಡುವ ಕುರಿತು ಮಾತಾಡಲು ಈವರೆಗೆ ನನ್ನ ಬಳಿಗೆ ಯಾರೂ ಬಂದಿಲ್ಲ. ವಾಜಪೇಯಿ ಸಂಭಾವಿತರು ಎಂದು ಮಾಧ್ಯಮಗಳಿಗೆ ಹೇಳಿಕೆಯಿತ್ತಿರುವ ಹೆಗಡೆ ಎಲ್ಲಿವರೆಗೆ ಬೇಕೋ ಅಲ್ಲಿವರೆಗೆ ಎನ್ಡಿಎ ಬಣದಲ್ಲೇ ಮುಂದುವರೆಯಲಿ. ನನಗೆ ಸೋನಿಯಾ ಗಾಂಧಿ ಅವರದ್ದಾಗಲೀ, ವಾಜಪೇಯಿ ಅವರದ್ದಾಗಲೀ ಹಂಗಿಲ್ಲ. ಲೋಕಸಭೆಗೆ ಹೋಗುವ, ಸಿಎಂ- ಪಿಎಂ ಆಗುವ ಆಸೆಯೂ ಇಲ್ಲ. ಯಾರ್ಯಾರು ಎಲ್ಲೆಲ್ಲಿ ಬೇಕೋ ಅಲ್ಲಲ್ಲೇ ಇರಲಿ ಬಿಡಿ ಎಂದು ಹೆಗಡೆ ಬಗ್ಗೆ ದೇವೇಗೌಡ ವ್ಯಂಗ್ಯದ ಮಾತುಗಳನ್ನಾಡಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...