ಸರ್ಕಾರ- ಬಿಸಿಸಿಐ ಟಂಗಾಟುಂಗಿಯಲ್ಲಿಕ್ರಿಕೆಟ್ ಚರಿಷ್ಮಾಗೆ ಕುತ್ತು
ನವದೆಹಲಿ : ಪಾಕಿಸ್ತಾನದೊಟ್ಟಿಗೆ ಕ್ರಿಕೆಟ್ ಆಡಬೇಕೆ, ಬೇಡವೇ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟ ನಿಯಮಾವಳಿಗಳನ್ನು ಹೇರುವವರೆಗೆ ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್, ಐಸಿಸಿ ನಾಕ್ಔಟ್ ಮತ್ತು ವಿಶ್ವಕಪ್ನಲ್ಲಿ ಆಡುವುದಿಲ್ಲ !
ಮಂಗಳವಾರ ಸ್ವಾಯತ್ತ ಸಂಸ್ಥೆ ಬಿಸಿಸಿಐ ಈ ಗಂಭೀರ ನಿರ್ಣಯ ಕೈಗೊಂಡಿದೆ. ಮಂಡಳಿ ಅಧ್ಯಕ್ಷ ಎ.ಸಿ.ಮುತ್ತಯ್ಯ ಸುದ್ದಿಗೊಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಟೊರಾಂಟೋ, ಸಿಂಗಪೂರ್ ಹಾಗೂ ಶಾರ್ಜಾದಂಥ ತಟಸ್ಥ ಜಾಗೆಗಳಲ್ಲಿ ಕನಿಷ್ಠ 3 ವರ್ಷಗಳ ಕಾಲ ಭಾರತ ಕ್ರಿಕೆಟ್ ಆಡುವುದಿಲ್ಲ ಎಂದು ಸರ್ಕಾರ ಈಗಾಗಲೇ ಹೇಳಿದೆ. ಆದರೆ ಮುಂದೆ ಪಾಕಿಸ್ತಾನ ಭಾಗವಹಿಸಬಹುದಾದ ಕೆಲವು ಮಹತ್ವದ ಟೂರ್ನಿಗಳಲ್ಲಿ ಭಾರತ ಆಡಬೇಕೆ, ಬೇಡವೇ ಎಂಬ ಬಗ್ಗೆ ಸರ್ಕಾರ ಏನೂ ಹೇಳಿಲ್ಲ. ಹೀಗಾಗಿ ಭಾರತ ಇನ್ನು ಮುಂದೆ ಟೆಸ್ಟ್ ಆಡುವ ದೇಶಗಳೊಂದಿಗೆ ಪರಸ್ಪರ ಸರಣಿ ಅಥವಾ ತ್ರಿಕೋನ ಸರಣಿ (ಪಾಕಿಸ್ತಾನ ತಂಡ ಆಡದೇ ಇರುವಂಥವು) ಗಳಲ್ಲಿ ಮಾತ್ರ ಆಡಲಿದೆ ಎಂದು ಮುತ್ತಯ್ಯ ಕಡ್ಡಿ ಮುರಿದಂತೆ ಹೇಳಿದರು.
ಐಸಿಸಿ ನಾಕ್ಔಟ್ ಬರುವ ವರ್ಷ ಹಾಗೂ ವಿಶ್ವ ಕಪ್ 2003ರಲ್ಲಿ ನಡೆಯಲಿದೆ. ಸರ್ಕಾರ , ಬಿಸಿಸಿಐನ ಈ ನಿರ್ಣಯಕ್ಕೆ ಕ್ಷಿಪ್ರವಾಗಿ ಉತ್ತರ ಕೊಡದಿದ್ದಲ್ಲಿ ಭಾರತದಲ್ಲಿ ಕ್ರಿಕೆಟ್ ತನ್ನ ಚರಿಷ್ಮಾ ಕಳಕೊಳ್ಳುವ ಭಯವಿದೆ.
(ಇನ್ಫೋ ವಾರ್ತೆ)