ಆಪ್ಟಿಕ್ ಫೈಬರ್ ಕೇಬಲ್ ಅಳವಡಿಕೆ ವಿಳಂಬ :ಎಸ್.ಎಂ. ಕೃಷ್ಣ ಎಚ್ಚರಿಕೆ
ಬೆಂಗಳೂರು : ಕರ್ನಾಟಕ ರಾಜ್ಯದ ರಸ್ತೆಗಳ ಸುಧಾರಣೆಗೆ ವಿಶ್ವಬ್ಯಾಂಕ್ 1635 ಕೋಟಿ ರುಪಾಯಿ ಸಾಲದ ನೆರವು ನೀಡಲು ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಲೋಕೋಪಯೋಗಿ ಸಚಿವ ಧರ್ಮಸಿಂಗ್ ಈ ವಿಷಯವನ್ನು ಮಂಗಳವಾರ ಇಲ್ಲಿ ತಿಳಿಸಿದರು.
ಏಪ್ರಿಲ್ 16ರಿಂದ 20ನೇ ತಾರೀಖಿನವರೆಗೆ ವಾಷಿಂಗ್ಟನ್ನಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ಶೇ. 72ರಷ್ಟು ಹಣಕಾಸು ನೆರವು ನೀಡಲು ನಿರ್ಧರಿಸಲಾಗಿತ್ತು, ಈಗ ನೆರವಿನ ಮೊತ್ತವನ್ನು ಶೇ.80ಕ್ಕೆ ಹೆಚ್ಚಿಸಲಾಗಿದೆ.
ಪುನರ್ವಸತಿಗೆ 487 ಕೋಟಿ ರುಪಾಯಿ, ಮರುವಸತಿಗೆ 31 ಕೋಟಿ ರುಪಾಯಿ ಹಾಗೂ ರಸ್ತೆಗಳ ಅಭಿವೃದ್ಧಿಗೆ ಉಳಿದ ಹಣವನ್ನು ಖರ್ಚು ಮಾಡಲಾಗುವುದು ಎಂದು ಧರ್ಮಸಿಂಗ್ ಹೇಳಿದರು. ಸುಮಾರು 2,300 ಕಿ.ಮೀಟರ್ ಉದ್ದ ರಸ್ತೆಗಳನ್ನು ನಾಲ್ಕು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದ ಮುಖ್ಯಮಂತ್ರಿಗಳು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಪರಿಸರ ಒಪ್ಪಿಗೆಗೆ ಈ ತಿಂಗಳ 27ರಂದು ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
ಎಚ್ಚರಿಕೆ : ನಗರದಲ್ಲಿ ಇಂಟರ್ನೆಟ್ ಸೇವೆ ಕಲ್ಪಿಸಲು ಅಳವಡಿಸಲಾಗುತ್ತಿರುವ ಆಪ್ಟಿಕ್ ಫೈಬರ್ ಕೇಬಲ್ ಅಳವಡಿಕೆ ಕಾರ್ಯದಲ್ಲಿ ಅಜಾಗರೂಕತೆ ವಹಿಸಿದರೆ ಅಥವಾ ಕಾಮಗಾರಿಯನ್ನು ನಿಗದಿತ ಕಾಲಮಿತಿಯಾಳಗೆ ಪೂರ್ಣಗೊಳಿಸದಿದ್ದರೆ, ಗುತ್ತಿಗೆದಾರ ಕಂಪನಿಗಳು ಇಟ್ಟಿರುವ ಇಡುಗಂಟನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೃಷ್ಣ ಎಚ್ಚರಿಕೆ ನೀಡಿದರು.
ಕೇಬಲ್ ಅಳವಡಿಕೆ ಕಾರ್ಯದಲ್ಲಿ ಆಗುತ್ತಿರುವ ಅನಗತ್ಯ ವಿಳಂಬದಿಂದಾಗಿ ಬೆಂಗಳೂರು ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಧೋರಣೆಯನ್ನು ಕಂಪನಿಗಳು ಮುಂದುವರಿಸಿದಲ್ಲಿ, ನಗರಪಾಲಿಕೆಯೇ ಈ ಕಾರ್ಯ ಪೂರ್ಣಗೊಳಿಸಿ, ಕಂಪನಿಗಳು ಇಟ್ಟಿರುವ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಲಾಗಿದೆ ಎಂದರು.